ನವದೆಹಲಿ (ಪಿಟಿಐ): ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಆದರ್ಶ ಗೋಯಲ್ ಮತ್ತು ಹೆಸರಾಂತ ವಕೀಲ ರೋಹಿಂಟನ್ ನಾರಿಮನ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆಯ್ಕೆ ಸಮಿತಿಯು ಇವರ ಹೆಸರುಗಳನ್ನು ಶಿಫಾರಸು ಮಾಡಿತ್ತು. ಶಿಫಾರಸು ಪಟ್ಟಿಯಲ್ಲಿದ್ದ ಮತ್ತೊಬ್ಬ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ ಅವರು, ಸರ್ಕಾರ ತಮ್ಮಲ್ಲಿ ಲೋಪ ಹುಡುಕಲು ಸಿಬಿಐ ಯನ್ನು ಛೂ ಬಿಟ್ಟಿದೆ ಎಂದು ಆರೋಪಿಸಿ, ತಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಡುವಂತೆ ಕೋರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಬುಧವಾರ ಪತ್ರ ಬರೆದಿದ್ದರು.
ಅರುಣ್ ಮಿಶ್ರಾ ಅವರು ಸದ್ಯ ಕೋಲ್ಕತ್ತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಮತ್ತು ಗೋಯಲ್ ಅವರು ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ಗೆ ಜೂನ್ 30ರವರೆಗೆ ಬೇಸಿಗೆ ರಜೆ ಇದೆ. ಇದಾದ ನಂತರ ಈ ಮೂವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.