ಉಡುಪಿ: ‘ರಾಜ್ಯ ಸರ್ಕಾರ ಮಠಗಳನ್ನು ಸ್ವಾಧೀನಕ್ಕೆ ಪಡೆಯಲಿದೆ ಎಂದು ಕೆಲ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ. ಇದು ನಿಜವೇ ಆದರೆ ಹಿಂದೂ ವಿರೋಧಿ ನೀತಿಯಾಗುತ್ತದೆ. ಸರ್ಕಾರವೇ ಪ್ರತಿ ಪಕ್ಷಗಳಿಗೆ ಹೋರಾಟ ಮಾಡಲು ಪ್ರಬಲ ಅಸ್ತ್ರ ನೀಡಿದಂತಾಗುತ್ತದೆ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಾತ್ಯತೀತ ಸರ್ಕಾರ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಮುಗ್ದ ಅಲ್ಪಸಂಖ್ಯಾತರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯಿರಿ ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಸರ್ಕಾರ ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ’ ಎಂದರು.
‘ಒಂದು ವೇಳೆ, ನಮ್ಮ ಮಠವನ್ನು ವಶಕ್ಕೆ ಪಡೆದರೆ ನಾನಂತೂ ಮಠವನ್ನು ಬಿಟ್ಟು ಹೊರ ಬಂದು ಸಮಾಜವನ್ನು ಆಶ್ರಯಿಸಿ ಬದುಕುತ್ತೇನೆ. ಸರ್ಕಾರದ ನೌಕರನಾಗಿ ಇರುವುದಿಲ್ಲ. ಹೋರಾಟವನ್ನೂ ಮಾಡುವುದಿಲ್ಲ. ಈ ವಿಷಯದ ಬಗ್ಗೆಯೇ ಜನರೇ ತೀರ್ಮಾನ ಮಾಡುವರು’ ಎಂದು ಸ್ವಾಮೀಜಿ ಹೇಳಿದರು.