ಮಡಿಕೇರಿ: ನಗರದಲ್ಲಿ ಜನವರಿ 7ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗೆ ಹಣಕಾಸಿನ ತೊಂದರೆ ಎದುರಾಗಿದೆ. ಸಮ್ಮೇಳನ ನಡೆಯಲು ಕೇವಲ 39 ದಿನಗಳು ಬಾಕಿ ಉಳಿ ದಿದ್ದು, ಇದುವರೆಗೆ ಊಟೋಪಚಾರ, ವಸತಿ ವ್ಯವಸ್ಥೆ, ಪೆಂಡಾಲ್ ಸೇರಿದಂತೆ ಯಾವ ಕಾಮಗಾ ರಿಗೂ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ.
ಲಕ್ಷಕ್ಕೂ ಹೆಚ್ಚು ಜನರು ಸೇರುವ ಸಮ್ಮೇಳನಕ್ಕಾಗಿ ಸುಮಾರು ₨ 3.75 ಕೋಟಿ ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಲಾಗಿದ್ದು, ಹಣ ಸಂಗ್ರಹ ಣೆಗಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಬಜೆಟ್ನಲ್ಲಿ ಘೋಷಣೆ ಮಾಡಿರುವ ₨ 1 ಕೋಟಿ ಕೂಡ ಇದುವರೆಗೆ ತಲುಪಿಲ್ಲ. ಸಾಮಾನ್ಯ ವಾಗಿ ಪ್ರತಿವರ್ಷ ಸಾಹಿತ್ಯ ಸಮ್ಮೇಳನಕ್ಕಾಗಿ ₨ 1 ಕೋಟಿ ಹಣವನ್ನು ಬಜೆಟ್ನಲ್ಲಿ ಘೋಷಣೆ ಮಾಡ ಲಾಗುತ್ತದೆ. ಸಮ್ಮೇಳನದ ದಿನಾಂಕ ಘೋಷಿಸಿದ ಕೆಲದಿನಗಳಲ್ಲಿಯೇ ಈ ಹಣವು ಸರ್ಕಾರದ ಖಜಾನೆಯಿಂದ ಸಮ್ಮೇಳನದ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಆದರೆ, ಈ ಬಾರಿ ಬಜೆಟ್ ಹಣ ಇದುವರೆಗೆ ತಲುಪಿಲ್ಲ. ಹೀಗಾಗಿ ವಿವಿಧ ಕಾರ್ಯಗಳಿಗೆ ಟೆಂಡರ್ ಕರೆಯಲು ಇದುವರೆಗೆ ಸಾಧ್ಯವಾಗಿಲ್ಲ.
ಬಜೆಟ್ ಹಣ ಹೊರತುಪಡಿಸಿ, ಹೆಚ್ಚುವರಿ ಯಾಗಿ ಇನ್ನೂ ₨1 ಕೋಟಿ ನೀಡುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹೆಚ್ಚುವರಿ ₨ 1 ಕೋಟಿ ಹಣದ ಪ್ರಸ್ತಾವನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಮಂಜೂರಾತಿಗಾಗಿ ಕಾದು ಕುಳಿತಿದೆ. ಬಾಕಿ ಹಣ ₨ 1.75 ಕೋಟಿ ಸಂಗ್ರಹಿಸಲು ಸರ್ಕಾರಿ ನೌಕರರು, ಸಾರ್ವಜನಿಕರು, ಕಾಫಿ ಬೆಳೆಗಾರರು ಹಾಗೂ ದಾನಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆದಿದೆ.
ಉದ್ಯಮಿಗಳಿಲ್ಲ, ವ್ಯಾಪಾರವಿಲ್ಲ: ಕೊಡಗು ಜಿಲ್ಲೆಯು ಅತ್ಯಂತ ಚಿಕ್ಕ ಜಿಲ್ಲೆಯಾಗಿದ್ದು, ಗುಡ್ಡ ಗಾಡು ಪ್ರದೇಶಗಳಿಂದ ಕೂಡಿದೆ. ಇದಲ್ಲದೇ, ವರ್ಷ ದ ಆರು ತಿಂಗಳು ಭಾರಿ ಪ್ರಮಾಣದಲ್ಲಿ ಮಳೆ ಸುರಿ ಯುತ್ತದೆ. ಇವೆಲ್ಲ ಕಾರಣಗಳಿಂದ ಉದ್ಯಮ ವಲಯವು ಅಷ್ಟಾಗಿ ಬೆಳೆದಿಲ್ಲ.
ಜಿಲ್ಲೆಯಲ್ಲಿ ಜನಸಂಖ್ಯೆಯು ಯಥಾಸ್ಥಿತಿಯಲ್ಲಿ ಇರುವುದರಿಂದ ವ್ಯಾಪಾರ ವಹಿವಾಟು ಕೂಡ ಜೋರಾಗಿ ನಡೆಯುವುದಿಲ್ಲ. ಹೀಗಾಗಿ ಬೇರೆ ಜಿಲ್ಲೆಗಳಂತೆ ಇಲ್ಲಿ ಉದ್ಯಮ– ವ್ಯಾಪಾರಿಗಳ ವಲಯದಿಂದ ಹೆಚ್ಚಿನ ಹಣ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಸಾಪ ಪದಾಧಿಕಾರಿಗಳು ತಮ್ಮ ಅಳಲು ತೋಡಿಕೊಂಡರು.
ಸರ್ಕಾರಿ ನೌಕರರ ಹಿಂದೇಟು: ಇವೆಲ್ಲದರ ನಡುವೆ ಆತಂಕದ ಸಂಗತಿಯೆಂದರೆ, ಜಿಲ್ಲೆಯ ಸರ್ಕಾರಿ ನೌಕರರು ಕೂಡ ‘ಕಾಣಿಕೆ’ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ನೌಕರರಿಂದ ಒಂದು ದಿನದ ಸಂಬಳ ಪಡೆಯುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ, ಕೊಡಗಿನಲ್ಲಿ ಸರ್ಕಾರಿ ನೌಕರರು ಒಂದು ದಿನದ ಸಂಬಳ ನೀಡುವ ಬದಲು ‘ಒಂದಿಷ್ಟು’ ಹಣ ನೀಡುತ್ತೇವೆಂದು ಹೇಳು ತ್ತಿದ್ದಾರೆ. ತಮ್ಮ ನಿಲುವನ್ನು ಸಡಿಲುಗೊಳಿಸುವಂತೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಮನವೊಲಿಸಲು ಕಸಾಪ ಪದಾಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.
ಕೇವಲ ಮೂರು ತಾಲ್ಲೂಕು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸಂಖ್ಯೆ ಕೂಡ ಕಡಿಮೆ ಇದೆ. ಇವರ ಒಂದು ದಿನದ ಸಂಬಳ ವನ್ನು ಪಡೆದರೆ, ಅಂದಾಜು ₨ 20 ಲಕ್ಷದವರೆಗೆ ಸಂಗ್ರಹವಾಗಬಹುದು. ಬಾಕಿ ಹಣವನ್ನು ಸಂಗ್ರಹಿ ಸುವುದು ಸವಾಲಾಗಿ ಪರಿಣಮಿಸಿದೆ.
ಹಣ ಸಂಗ್ರಹಣೆಯಲ್ಲಿ ತೊಂದರೆಯಾಗುತ್ತಿದ್ದರೆ ಸಮ್ಮೇಳನದ ದಿನಾಂಕವನ್ನು ಮುಂದೂಡುವಂತೆ ಕೆಲವರು ಸಲಹೆ ನೀಡಿದ್ದಾರೆ. ಆದರೆ, ಲೋಕಸಭಾ ಚುನಾವಣೆಯು ಸನಿಹದಲ್ಲಿರುವುದರಿಂದ ಫೆಬ್ರು ವರಿ, ಮಾರ್ಚ್ ವೇಳೆಗೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಇದಾದ ನಂತರ ಚುನಾವಣೆ ಮುಗಿಯುವಷ್ಟರಲ್ಲಿ ಮಳೆ ಗಾಲ ಆರಂಭವಾಗಿ ಬಿಡುತ್ತದೆ. ಆರು ತಿಂಗಳ ಕಾಲ ಸುರಿಯುವ ಧಾರಾಕಾರ ಮಳೆಯಲ್ಲಿ ಸಮ್ಮೇಳನ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ಈಗಿನ ದಿನಾಂಕ ವನ್ನು ಮುಂದೂಡಿದರೆ, ಮುಂದಿನ ನವೆಂಬರ್– ಡಿಸೆಂಬರ್ವರೆಗೆ ಸಾಧ್ಯವಾಗುವುದಿಲ್ಲ ಎನ್ನುವುದು ಕಸಾಪ ಪದಾಧಿಕಾರಿಗಳ ಮಾತು.
‘ಹಣ ತರಲು ಪ್ರಯತ್ನ’
ಬಜೆಟ್ನಲ್ಲಿ ಘೋಷಿಸಿದ ಹಣ ಇದುವರೆಗೆ ನಮ್ಮ ಕೈಸೇರಿಲ್ಲ ಎನ್ನುವುದು ನಿಜ. ಇದಕ್ಕೆ ಸಂಬಂ ಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಈ ಭಾಗದ ಸಂಸದರಾದ ಎಚ್. ವಿಶ್ವ ನಾಥ್ ಅವರ ಜೊತೆ ಚರ್ಚಿಸಿದ್ದೇವೆ. ಸದ್ಯದ ಲ್ಲಿಯೇ ಹಣ ಬಿಡುಗಡೆಯಾಗುವ ವಿಶ್ವಾಸ ನಮ ಗಿದೆ. ಬಾಕಿ ಹಣವನ್ನು ಸಂಗ್ರಹಿಸಲು ಸಹ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಅದ್ದೂರಿಯಾಗಿ ಸಮ್ಮೇ ಳನ ನಡೆಯಲಿದೆ ಯಾವುದೇ ಆತಂಕ ಬೇಡ.
– ಟಿ.ಪಿ. ರಮೇಶ್, ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.