ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ‘ಆಘಾತಕಾರಿ ಸಂಗತಿಯೆಂದರೆ, ಮೋದಿ ಸರ್ಕಾರವು ಈಗ ಬಳ್ಳಾರಿ ಗ್ಯಾಂಗ್ನ ಹಿತೈಷಿ ಹಾಗೂ ರಕ್ಷಕ ಆಗಿ ಮಾರ್ಪಟ್ಟಿದೆ. ಜನಾರ್ದನ ರೆಡ್ಡಿ ಹಾಗೂ ಆಪ್ತರು ಗಣಿ ಅಕ್ರಮ ನಡೆಸುವ ಮೂಲಕ ಬಳ್ಳಾರಿಯ ಶ್ರೀಮಂತ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದಿದ್ದರು. ಅಕ್ರಮ ಗಣಿಗಾರಿಕೆಯ 20 ಪ್ರಕರಣಗಳು ವಿಚಾರಣೆಯ ಹಂತದಲ್ಲಿರುವಾಗಲೇ ರೆಡ್ಡಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ಭ್ರಷ್ಟರಿಗೆ ರಕ್ಷಣೆ ನೀಡಲು ಮುಂದಾಗಿದೆ’ ಎಂದು ದೂರಿದರು.