ಅಂಕೋಲಾ: ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀಪಾದ ನಾಯಕ್ ಅವರ ಕಾರು ತಾಲ್ಲೂಕಿನ ಹೊಸಕಂಬಿ ಚೆಕ್ಪೋಸ್ಟ್ ಬಳಿ ಸೋಮವಾರ ಸಂಜೆ ಪಲ್ಟಿಯಾಗಿದೆ. ಅಪಘಾತದಲ್ಲಿ ಅವರ ಪತ್ನಿ ವಿಜಯಾ ನಾಯಕ್ (55) ಹಾಗೂ ಕಾರಿನಲ್ಲಿದ್ದ ಸಚಿವರ ಆಪ್ತ ಕಾರ್ಯದರ್ಶಿ ದೀಪಕ್ ದುಮೆಎಂಬುವವರು ಮೃತಪಟ್ಟಿದ್ದಾರೆ. ನಾಲ್ವರಿಗೆ ಗಾಯಗಳಾಗಿವೆ.
ವಿಜಯಾ ಅವರನ್ನು ಅಂಕೋಲಾದ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ನಿಧನರಾದರು. ಸಚಿವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅಂಕೋಲಾದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ನಲ್ಲಿ ಗೋವಾಕ್ಕೆ ಕಳುಹಿಸಿಕೊಡಲಾಯಿತು.
ಯಲ್ಲಾಪುರದ ಗಂಟೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದರು. ಹೊಸಕಂಬಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಯಿತು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅಂಕೋಲಾಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.
ಕಾರಿನಲ್ಲಿ ಶ್ರೀಪಾದ ನಾಯಕ್, ಅವರ ಪತ್ನಿ ವಿಜಯಾ ನಾಯಕ್, ದೀಪಕ್ ದುಬೆ, ಗನ್ಮ್ಯಾನ್ ತುಕಾರಾಂ ಪಾಟೀಲ, ಸಾಯಿ ಕಿರಣ ಶೇಟಿಯಾ ಪ್ರಯಾಣಿಸುತ್ತಿದ್ದರು. ಸೂರಜ್ ನಾಯ್ಕ ಕಾರು ಚಲಾಯಿಸುತ್ತಿದ್ದರು.
ಕೇಂದ್ರ ಆಯುಷ್ ಇಲಾಖೆ ಸಚಿವರಾದ ಶ್ರೀಪಾದ್ ನಾಯಕ್ ಅವರ ಪತ್ನಿ ವಿಜಯಾ ಶ್ರೀಪಾದ್ ನಾಯಕ್ ಅವರು ಅಂಕೋಲಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿರುವ ವಿಷಾದನೀಯ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/7vFoQI27hW