ಮೈಸೂರು: ಕೇಂದ್ರ ಸರ್ಕಾರ ಬರ ಪರಿಹಾರವನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ನಮ್ಮ ರೈತರು ಸಂಕಷ್ಟದಲ್ಲಿ ಇರುವುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಬೈಲುಕುಪ್ಪೆಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಎರಡು ತಿಂಗಳು ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದಾಗಿಯೂ ಭೇಟಿಯಾಗಿ ಬರ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೆ. ಬೇಗ ಕೊಡಿ ಎಂದೂ ಕೋರಿದ್ದೆ. ಆದರೆ, ಕೇಂದ್ರದವರು ಒಮ್ಮೆ ಸಭೆ ಕರೆದು ಮುಂದೂಡಿದರು.
ಪ್ರಧಾನಿಯವರು ಈಚೆಗೆ ಬೆಂಗಳೂರಿಗೆ ಬಂದಾಗಲೂ, ಬರ ಪರಿಹಾರ ನೀಡುವಂತೆ ಕೇಳಿಕೊಂಡಿದ್ದೆ. ಅಲ್ಲಿಂದ ಸ್ಪಂದನೆ ಸಿಗದಿದ್ದರಿಂದಾಗಿ,ಸದ್ಯಕ್ಕೆ ನಾವೇ ಬರ ನಿರ್ವಹಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ನಮ್ಮ ಸರ್ಕಾರದಿಂದ ಈವರೆಗೆ ₹ 2 ಸಾವಿರ ಕೋಟಿ ಖರ್ಚು ಮಾಡಿದ್ದೇವೆ.
ಬರ ಪರಿಹಾರಕ್ಕೆ ಈಗ ₹ 550 ಕೋಟಿ ಬಿಡುಗಡೆ ಮಾಡಿದ್ದೇವೆ. ರೈತರಿಗೆ ಮೊದಲ ಕಂತಿನ ಹಣವನ್ನು ಮುಂದಿನ ವಾರ ಅವರವರ ಖಾತೆಗೆ ಹಾಕಲಾಗುವುದು. ಕೇಂದ್ರದವರು ಪರಿಹಾರ ಬಿಡುಗಡೆ ಮಾಡಿಲ್ಲವೆಂದು ನಾವು ಸುಮ್ಮನೆ ಕುಳಿತಿಲ್ಲ. ಸದ್ಯಕ್ಕೆ ಕುಡಿಯುವ ನೀರಿಗೆ ತೊಂದರೆ ಇಲ್ಲ. ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಾದಲ್ಲಿ ಬರ ಪರಿಹಾರ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ ಪಾಲ್ಗೊಂಡಿದ್ದರು.