ಮಂಡ್ಯ: ಜಿಲ್ಲೆಯಲ್ಲಿ ಅಂಬರೀಷ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಸರ್ಕಾರಕ್ಕೆ ಸವಾಲಾಗಿತ್ತು. ಹಲವು ಸಮಸ್ಯೆಗಳ ನಡುವೆಯೂ ಅಂತಿಮ ದರ್ಶನ ಸುಸೂತ್ರವಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಾಧ್ಯಮದವರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಂಬರೀಷ್ ಅವರ ಸ್ವಚ್ಚ ಮನಸ್ಸಿನಿಂದ ಅವರ ಅಂತ್ಯ ಕಾಲದಲ್ಲೂ ಸುಗಮವಾದ ರೀತಿ ಕಾರ್ಯ ನಡೆಯುತ್ತಿದೆ. ಎಲ್ಲರೂ ಕೊಟ್ಟ ಸಹಕಾರಕ್ಕೆ ನಾನು ಆಬಾರಿ ಎಂದು ಕೃತಜ್ಞತೆ ಸಲ್ಲಿಸಿದರು.
ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ರಾಜ್ಕುಮಾರ್ ಸಮಾಧಿಯ ಬಳಿ ಅಂಬರೀಷ್ ಅಂತ್ಯ ಸಂಸ್ಕಾರ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
‘ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇ ಬೇಕು ಅನ್ನೋದು ಅವರ ಅಭಿಮಾನಿಗಳ ಬಯಕೆಯಾಗಿತ್ತು. ಅದರಂತೆ ಸರ್ಕಾರದವತಿಯಿಂದ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಸುಮಾರು ಎರಡುವರೆ ಲಕ್ಷ ಜನರು ಇಲ್ಲಿ ಅಂತಿಮ ದರ್ಶನ ಪಡೆದಿದ್ದಾರೆ. ಮಂಡ್ಯದ ಜನತೆ ಹಾಗೂ ಎಲ್ಲರೂ ಅವರ ಮೇಲೆ ಇಟ್ಟಿರುವ ಪ್ರೀತಿ ಎಂಥದ್ದು ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.
ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಕಂಠೀರವ ಕ್ರೀಡಾಂಗಣಕ್ಕೆ ತಂದು ಅಲ್ಲಿಂದ ಪ್ರಮುಖ ರಸ್ತೆಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಸಾಗಲಿದೆ. ನಂತರ ಕಂಠೀರವ ಸ್ಟುಡಿಯೊದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದರು.
ನಾಡಿಗೆ ಸೇವೆ ಸಲ್ಲಿಸಿದ ಕಲಾವಿದರಿಗೆ ಗೌರವ ಕೊಡಬೇಕು. ಅಂಬರೀಷ್ ನನ್ನ ಆರೋಗ್ಯದ ಬಗ್ಗೆ ಕರೆ ಮಾಡಿ ಎಚ್ಚರಿಕೆ ಕೊಡುತ್ತಿದ್ದರು. ನಿಮ್ಮ ಸೇವೆ ಸಮಾಜಕ್ಕೆ ಬೇಕು ಎಂದು ಹೇಳುತ್ತಿದ್ದರು. ನನಗಿಂತ ಅಂಬರೀಷ್ ಎಂಟು ವರ್ಷ ದೊಡ್ಡವರು. ನನಗೆ ಅವರು ಅಣ್ಣನ ರೀತಿ..#Ambareesh
— CM of Karnataka (@CMofKarnataka) November 26, 2018
‘ಕಲಾವಿದರು ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಕೊಡಬೇಕು. ನನ್ನ ಆರೋಗ್ಯದ ಬಗ್ಗೆ ಕರೆ ಮಾಡಿ ಎಚ್ಚರಿಕೆ ಕೊಡುತ್ತಿದ್ದರು. ನಿಮ್ನ ಸೇವೆ ಸಮಾಜಕ್ಕೆ ಬೇಕು ಎಂದು ಹೇಳುತ್ತಿದ್ದರು. ನನಗಿಂತ ಅಂಬರೀಷ್ ಅವರು ಎಂಟು ವರ್ಷ ದೊಡ್ಡವರು. ನನಗೆ ಅವರು ಅಣ್ಣನ ರೀತಿ’ ಎಂದರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿ ಬಸ್ ದುರಂತ ಮೃತರ ಕುಟುಂಬಕ್ಕೆ ಪರಿಹಾರ ಬಂದಿದೆ. ಸುಮಾರು ಒಂದುವರೆ ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ. ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷಪರಿಹಾರ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ಇತರರು ಉಪಸ್ಥಿತರಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.