ಬೆಂಗಳೂರು: ‘ನಮ್ಮಂಥವರನ್ನು, ಅಂದರೆ ಸಮುದಾಯದವರನ್ನು ಕುಮಾರಸ್ವಾಮಿ ಕಳೆದುಕೊಳ್ಳುವುದು ಸರಿಯಲ್ಲ. ಸಮುದಾಯಕ್ಕಾಗಿ ನಾನು ಅವರಿಗೆ ಗೌರವ ಕೊಟ್ಟು, ಅವರು ಏನೇ ಹೇಳಿದರೂ ಸಹಿಸಿಕೊಂಡಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕುಮಾರಸ್ವಾಮಿ ನನಗೆ ಗೌರವ ಕೊಟ್ಟರೆ, ಅದೇ ಗೌರವವನ್ನು ನಾನೂ ಕೊಡುತ್ತೇನೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಚುನಾವಣೆ ನಂತರ ಅವರ ಪಕ್ಷ ಯಾವ ಸ್ಥಿತಿಗೆ ತಲುಪಲಿದೆ ಕಾದುನೋಡಿ’ ಎಂದರು.
‘ಪದೇ ಪದೇ ನನ್ನ ಬಗ್ಗೆ ವೈಯಕ್ತಿಕ ವಿಚಾರವಾಗಿ ಬಂಡೆ ಒಡೆದ, ವಿಷ ಹಾಕಿದ, ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಸಿಕೊಂಡಿದ್ದೇನೆ ಎಂದೆಲ್ಲ ಕುಮಾರಸ್ವಾಮಿ ಆಧಾರರಹಿತ ಟೀಕೆ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ನಾನು ಬಂಡೆ ಒಡೆದಿದ್ದರೆ, ಅದು ನನ್ನ ಜಮೀನಿನ ಬಂಡೆ. ಕಾನೂನುಬದ್ಧವಾಗಿಯೇ ಒಡೆದಿದ್ದೇನೆ’ ಎಂದರು.
ಬಿಜೆಪಿಯವರು ಯಾಕೆ ಪ್ರತಿಕ್ರಿಯಿಸುತ್ತಿಲ್ಲ?: ‘ಮತ ಹಾಕದೇ ಇದ್ದರೆ ಅಪಾರ್ಟ್ಮೆಂಟ್ ನಿವಾಸಿಗಳಿಗೆ ನೀರು ಪೂರೈಕೆ ಮಾಡುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಬೆದರಿಕೆ ಹಾಕಿದ್ದಾರೆಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಈ ಕಷ್ಟ ಕಾಲದಲ್ಲಿ ನಾವು ಎಲ್ಲರಿಗೂ ನೀರು ಕೊಡುತ್ತಿದ್ದೇವೆ. ಅವರು ಸುಖಾಸುಮ್ಮನೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ’ ಎಂದರು.
‘ಹೆಣ್ಣು ಮಕ್ಕಳ ಬಗ್ಗೆ ಮಾತನಾಡಲು ಕುಮಾರಸ್ವಾಮಿಗೆ ಹೇಳಿದವರು ಯಾರು? ಅವರ ಮಾತುಗಳಿಂದ ಮಹಿಳೆಯರಿಗೆ ಅಪಮಾನವಾಗಿದೆ. ಕುಮಾರಸ್ವಾಮಿ ಅವರ ಹೇಳಿಕೆಗೆ ಬಿಜೆಪಿ ನಾಯಕರು ಯಾಕೆ ಪ್ರತಿಕ್ರಿಯಿಸುತ್ತಿಲ್ಲ. ಯಡಿಯೂರಪ್ಪ, ಆರ್. ಅಶೋಕ ಬಾಯಿ ಬಿಡುತ್ತಿಲ್ಲ ಯಾಕೆ’ ಎಂದು ಪ್ರಶ್ನಿಸಿದರು.
‘ಡಿ.ಕೆ. ಶಿವಕುಮಾರ್ ಒಕ್ಕಲಿಗ ನಾಯಕನಲ್ಲ’ ಎಂಬ ಆರ್. ಅಶೋಕ ಹೇಳಿಕೆ ಬಗ್ಗೆ ಕೇಳಿದಾಗ, ‘ನಾನು ನಾಯಕನೇ ಅಲ್ಲ. ಅವರು ದೊಡ್ಡ ನಾಯಕರು. ನಾನು ಸಾಮಾನ್ಯ ಕಾರ್ಯಕರ್ತ’ ಎಂದು ವ್ಯಂಗ್ಯವಾಡಿದರು.