ಬೆಂಗಳೂರು: 10 ವರ್ಷಗಳ ಹಿಂದೆ ಜಗತ್ತಿನ ದುರ್ಬಲ ಆರ್ಥಿಕ ರಾಷ್ಟ್ರ ಎಂದು ಕರೆಯಲ್ಪಡುತ್ತಿದ್ದ ಭಾರತ ಈಗ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದ್ದು, ಮುಂದಿನ ವರ್ಷ ಇದೇ ವೇಳೆಗೆ ನಾಲ್ಕನೇ ಸ್ಥಾನಕ್ಕೆ ಏರುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರ ವಾರ್ಡ್ನಲ್ಲಿ ಭಾನುವಾರ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ಆರ್ಸಿ ಡಿಜಿಟಲ್ ವಾಹನದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
‘ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದದೇ ಇರುವ ಹಿಂದುಳಿದ ರಾಷ್ಟ್ರಗಳು ಎಂಬುದಾಗಿ ವಿಭಾಗಿಸಲಾಗಿದೆ. ಇದು ಬಹಳ ಹಳೆಯ ಪರಿಭಾಷೆ. 10 ವರ್ಷಗಳಿಂದ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುವತ್ತ ದೊಡ್ಡ ಹೆಜ್ಜೆಯನ್ನು ಇಡಲಾಗಿದೆ. ಮುಂದಿನ 10 ವರ್ಷವೂ ನಾವು ಕೆಲಸ ಮಾಡುತ್ತಲೇ ಇರುತ್ತೇವೆ’ ಎಂದು ಹೇಳಿದರು.
‘2009–14 ನಡುವಿನ ಅವಧಿಯಲ್ಲಿ ನಾವು ವಿರೋಧಪಕ್ಷದಲ್ಲಿದ್ದೆವು. ಆಗ ಸಂಸತ್ತಿನಲ್ಲಿ ಭಾರತದ ಆರ್ಥಿಕ ಸ್ಥಿತಿಯು ಗಂಭೀರವಾಗಿರುವುದು, ಭಾರತದ ಬ್ಯಾಂಕ್ಗಳ ಎನ್ಪಿಎ ಪರಿಣಾಮದ ಚರ್ಚೆ ನಡೆಯುತ್ತಿತ್ತು’ ಎಂದರು.
‘ಈಗ ನಾವು ಇಂಗ್ಲೆಂಡ್ ಅನ್ನು ಹಿಂದಕ್ಕೆ ಹಾಕಿ ಐದನೇ ಸ್ಥಾನ ಪಡೆದಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಬೇಕು ಎಂಬುದು ಪ್ರಧಾನಿ ಮೋದಿಯವರ ಸಂಕಲ್ಪವಾಗಿದೆ. ಅಮೆರಿಕ, ಚೀನಾ ಬಳಿಕ ನಮ್ಮ ಸ್ಥಾನ ಬರಲಿದೆ’ ಎಂದು ಜೋಶಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಬಿಜೆಪಿ ಮುಖಂಡರಾದ ಮಂಜುನಾಥ್, ಎಂ.ಚಂದ್ರು, ಸಂಪತ್ಕುಮಾರ್, ಎಂ.ಗೋಪಿ, ಗುಣಶೇಖರ್, ಬಾಲಾಜಿ ಮಣಿ ಇತರರು ಇದ್ದರು.
ಇದು ಮೋದಿ ಗ್ಯಾರಂಟಿ ವಾಹನ..
‘ಕೇಂದ್ರದ ವಿವಿಧ ಯೋಜನೆಗಳ ಲಾಭವನ್ನು ಸಾರ್ವಜನಿಕರಿಗೆ ತಿಳಿಸಲು ಈ ವಾಹನಗಳು ದೇಶದ ಎಲ್ಲ ಕಡೆಗಳಲ್ಲಿ ಓಡಾಡುತ್ತಿವೆ. ಇದನ್ನು ಮೋದಿ ಗ್ಯಾರಂಟಿ ವಾಹನ ಎಂದೇ ಕರೆಯಲಾಗುತ್ತಿದೆ’ ಎಂದು ಜೋಶಿ ತಿಳಿಸಿದರು. ‘₹25 ಲಕ್ಷಕ್ಕಿಂತ ಕಡಿಮೆ ಮೊತ್ತದಲ್ಲಿ ಮನೆ ನಿರ್ಮಿಸುವ ಮಧ್ಯಮ ವರ್ಗದವರಿಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ಸಿಗುತ್ತಿದೆ’ ಎಂದರು