ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ತಿಂಗಳಲ್ಲೇ ಪದವಿ ಕಾಲೇಜು ಬೋಧಕ ಸಿಬ್ಬಂದಿಗೆ ಮೂರನೇ ವರ್ಗಾವಣೆ!

ಪದವಿ ಕಾಲೇಜು ಬೋಧಕ ಸಿಬ್ಬಂದಿ ವರ್ಗಕ್ಕೆ ಅಧಿಸೂಚನೆ ಹೊರಡಿಸಿದ ಇಲಾಖೆ
Published 15 ಜುಲೈ 2023, 0:36 IST
Last Updated 15 ಜುಲೈ 2023, 0:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಬೋಧಕ ಸಿಬ್ಬಂದಿಯ ವರ್ಗಾವಣೆಗೆ ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಇದು 15 ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಮೂರನೇ ವರ್ಗಾವಣೆ ಪ್ರಕ್ರಿಯೆ.

ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಗ್ರಂಥಪಾಲಕರು ಹಾಗೂ ಕ್ರೀಡಾ ನಿರ್ದೇಶಕರ ವರ್ಗಾವಣೆಗೆ 2021ರವರೆಗೂ ಸೂಕ್ತ ನಿಯಮಗಳನ್ನೇ ರೂಪಿಸಿರಲಿಲ್ಲ. 2009ರ ನಂತರ ವರ್ಗಾವಣಾ ಪ್ರಕ್ರಿಯೆಗಳು ಸಂಪೂರ್ಣ ಸ್ಥಗಿತವಾಗಿದ್ದವು. 2021ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆಗೆ ನಿಯಮಗಳನ್ನು ರೂಪಿಸಿ, ಜಾರಿಗೊಳಿಸಲಾಯಿತಾದರೂ ಆ ವರ್ಷ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿರಲಿಲ್ಲ. 2022ರ ಏಪ್ರಿಲ್‌ನಲ್ಲಿ ವರ್ಗಾವಣೆಗೆ ಅಧಿಸೂಚನೆ ಹೊರಡಿಸಲಾಯಿತು. ನಂತರ ಅದೇ ವರ್ಷದ ಡಿಸೆಂಬರ್‌ನಲ್ಲಿ ಮತ್ತೊಂದು ಸುತ್ತಿನ ವರ್ಗವಣೆ ಮಾಡಲಾಯಿತು. ಇದೇ ತಿಂಗಳು ಮತ್ತೆ ಬೋಧಕ ಸಿಬ್ಬಂದಿಯ ವರ್ಗಾವಣಾ ಪ್ರಕ್ರಿಯೆ ಆರಂಭಿಸಲಾಗಿದೆ. ಕಡ್ಡಾಯ ವರ್ಗಾವಣೆ ಶೇ 9, ದಂಪತಿ ಪ್ರಕರಣ ಶೇ 3 ಸೇರಿದಂತೆ ಒಟ್ಟು ಶೇ 15ರಷ್ಟು ವರ್ಗಾವಣೆಗೆ ಅವಕಾಶ ನೀಡಲಾಗಿದ್ದು, ಆದ್ಯತಾ ಪಟ್ಟಿ ಪ್ರಕಟಿಸಲಾಗಿದೆ. ಇದೇ 25ರಿಂದ 28ರವರೆಗೆ ಕೌನ್ಸೆಲಿಂಗ್ ನಡೆಯಲಿದೆ.

2022ರ ಏಪ್ರಿಲ್‌ನಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದಾಗ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿದೆ ಎಂದು ಬಹುತೇಕ ಪ್ರಾಧ್ಯಾಪಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇಲಾಖೆ ವರ್ಗಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿತ್ತು. ಕಳೆದ ವರ್ಷದ ವರ್ಗಾವಣೆಯಲ್ಲಿ 900 ಬೋಧಕ ಸಿಬ್ಬಂದಿ ಅವಕಾಶ ಪಡೆದಿದ್ದರು. ಬೆಂಗಳೂರು ನಗರವನ್ನು ‘ಎ’ ಕೇಂದ್ರವಾಗಿ, ರಾಜ್ಯದ ಮಹಾನಗರ ಪಾಲಿಕೆ ಇರುವ 9 ನಗರಗಳನ್ನು ‘ಬಿ’ ಉಳಿದ ಜಿಲ್ಲಾ ಕೇಂದ್ರಗಳನ್ನು ‘ಸಿ’ ತಾಲ್ಲೂಕು ಕೇಂದ್ರಗಳನ್ನು ‘ಡಿ’ ಹಾಗೂ ಹೋಬಳಿ ಮಟ್ಟದಲ್ಲಿರುವ ಪದವಿ ಕಾಲೇಜುಗಳನ್ನು ‘ಇ’ ವಲಯಗಳಾಗಿ ವಿಂಗಡಿಸಲಾಗಿದೆ. ಮೊದಲ ವರ್ಗಾವಣೆಯಲ್ಲಿ ಆಯಾ ವಲಯದ ಅದೇ ನಗರಗಳಲ್ಲಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಒಂದು ನಗರ, ತಾಲ್ಲೂಕು, ಹೋಬಳಿಯ ಕಾಲೇಜುಗಳಲ್ಲಿ ಕೆಲಸ ಮಾಡಿದವರು ಅದೇ ವ್ಯಾಪ್ತಿಯ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ.

‘ಅನಿಯಮಿತವಾಗಿ ವರ್ಗಾವಣೆ ಮಾಡಿದರೆ ಕೌಟುಂಬಿಕ ಸಮಸ್ಯೆ ಇರುವ ಬೋಧಕರಿಗೆ ಅನನುಕೂಲವಾಗುತ್ತದೆ. ಅಲ್ಲದೇ, ‘ಬಿ’ಯಿಂದ ‘ಇ’ವರೆಗಿನ ವಲಯಗಳಲ್ಲಿ ಇತರೆ ನಗರಗಳ ಆಯ್ಕೆಗಳಿವೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಅಂತಹ ಅವಕಾಶ ಇಲ್ಲ. ಇದರಿಂದ ಬೋಧಕರು ಅನಿವಾರ್ಯವಾಗಿ ಬೆಂಗಳೂರಿನಿಂದ ಹೊರಗೆ ಹೋಗಬೇಕಾಗುತ್ತದೆ.  ಪ್ರಯಾಣದಲ್ಲೇ ಸಾಕಷ್ಟು ಸಮಯ ವ್ಯರ್ಥವಾಗುವ ಆತಂಕ ಎದುರಾಗಿದೆ’ ಎನ್ನುತ್ತಾರೆ ಪದವಿ ಕಾಲೇಜು ಪ್ರಾಧ್ಯಾಪಕ ರಮೇಶ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT