ಬೆಂಗಳೂರು:‘ಎಚ್.ಡಿ.ಕುಮಾರಸ್ವಾಮಿ ಮಗ ಮಂಡ್ಯದಲ್ಲಿ ಸೋತಿದ್ದಾನೆ. ತುಮಕೂರಿನಲ್ಲಿ ಅವರಪ್ಪ ಸೋತಿದ್ದಾರೆ. ಇವರಿಗೆ ಅಸ್ತಿತ್ವದ ಕೊರತೆ ಇದೆ’ ಎಂದು ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಶಾಸಕರ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಬೇಕಿದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೇ ಸ್ಪರ್ಧಿಸಲಿ. ಅವರು ಈಗ ಪ್ರತಿನಿಧಿಸುವ ಕ್ಷೇತ್ರ ಗ್ರಾಮಾಂತರವೇ ಆಗಿದೆಯಲ್ಲವೇ? ಮಂಡ್ಯ, ತುಮಕೂರು ಕ್ಷೇತ್ರಗಳು ಏಕೆ ಬೇಕು’ ಎಂದು ಪ್ರಶ್ನಿಸಿದರು.
‘ಹಾಸನದವರು ಹೇಮಾವತಿ ವಿಚಾರದಲ್ಲಿ ತುಮಕೂರಿನವರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ದೇವೇಗೌಡರು ಅಲ್ಲಿ ಸೋತರು. ಕುಮಾರಸ್ವಾಮಿ ಸಂಸದರಾಗಿದ್ದಾಗ ಒಂದು ದಿನವೂ ಕ್ಷೇತ್ರಕ್ಕೆ ಮುಖ ತೋರಿಸಲಿಲ್ಲ. ಇವರಿಗೆ ಅಧಿಕಾರ ಬೇಕಿತ್ತು. ಅದಕ್ಕಾಗಿ ದೆಹಲಿಗೆ ಓಡಾಡಿಕೊಂಡಿದ್ದರು’ ಎಂದು ಹೇಳಿದರು.
‘ಬೆಂಗಳೂರು ಗ್ರಾಮಾಂತರ ಜನ ಡಿ.ಕೆ. ಸುರೇಶ್ ಅವರಂತಹ ಸಂಸದರನ್ನು ಕಳೆದುಕೊಂಡರೆ ಕ್ಷೇತ್ರಕ್ಕೆ ನಷ್ಟ. ಈ ರೀತಿಯ ಸಂಸದರನ್ನು ನಮ್ಮ ಜೀವನದಲ್ಲಿ ನೋಡಲು ಸಾಧ್ಯವಿಲ್ಲ. ಸುರೇಶ್ ಗೆದ್ದರೆ ನಮಗೆ ಅನುಕೂಲ. ಬಿಜೆಪಿ–ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಅನುಕೂಲ. ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಸಾಕಷ್ಟು ಜನ ಬರುತ್ತಾರೆ’ ಎಂದರು.