ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಹಟ್ಟಿಕೆರೆ ಅಕ್ರಮ ಟೋಲ್‌ ಪ್ಲಾಜಾ– ಅರಣ್ಯ ಇಲಾಖೆಗೆ ಎಸಿಎಸ್‌ ತರಾಟೆ

ಅರಣ್ಯ ಜಾಗದಲ್ಲಿ ಟೋಲ್‌ ಪ್ಲಾಜಾ– ತಪ್ಪಿತಸ್ಥ ಅಧಿಕಾರಿಗಳ ಮಾಹಿತಿಗೆ ಹಿಂದೇಟು
Published 19 ಅಕ್ಟೋಬರ್ 2023, 14:58 IST
Last Updated 19 ಅಕ್ಟೋಬರ್ 2023, 14:58 IST
ಅಕ್ಷರ ಗಾತ್ರ

ನವದೆಹಲಿ: ಚತುಷ್ಪಥ ಕಾಮಗಾರಿ ವೇಳೆ ಉತ್ತರ ಕನ್ನಡ ಜಿಲ್ಲೆಯ ಹಟ್ಟಿಕೆರೆ ಗ್ರಾಮದಲ್ಲಿ ಅಕ್ರಮವಾಗಿ ಟೋಲ್‌ ಪ್ಲಾಜಾ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಪ್ರಕರಣದ ಸಮಗ್ರ ವರದಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿವರ ಒದಗಿಸದ ಅರಣ್ಯ ಇಲಾಖೆಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳ ವಿವರವನ್ನು ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಕೂಡಲೇ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ. 

ಗೋವಾ–ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಟೋಲ್‌ ಪ್ಲಾಜಾ ನಿರ್ಮಾಣಕ್ಕೆ ಅರಣ್ಯ ಸಂರಕ್ಷಣಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ 6 ಎಕರೆ ಅರಣ್ಯ ಬಳಕೆಗೆ ಅನುಮತಿ ನೀಡಿದ ಪ್ರಕರಣ ಇದಾಗಿದೆ. ಅರಣ್ಯ ಒತ್ತುವರಿಗೆ ಕಾರಣರಾದ ಅಧಿಕಾರಿಗಳ ವಿವರಗಳನ್ನು ಒದಗಿಸುವಂತೆ ಸಚಿವಾಲಯವು 2022ರ ಅಕ್ಟೋಬರ್‌ ಹಾಗೂ 2023ರ ಮೇ ತಿಂಗಳಲ್ಲಿ ಸೂಚಿಸಿತ್ತು. ಆದರೆ, ಅರಣ್ಯ ಇಲಾಖೆಯು ಅಪೂರ್ಣ ಮಾಹಿತಿ ಒದಗಿಸಿತ್ತು. ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಅರಣ್ಯ ಇಲಾಖೆ ಎರಡು ಬಾರಿ ಕಳುಹಿಸಿರುವ ವರದಿಯೂ ಅಪೂರ್ಣವಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದ ಸಚಿವಾಲಯದ ಉಪ ಮಹಾನಿರ್ದೇಶಕರು ಸೆಪ್ಟೆಂಬರ್‌ 25ರಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಅವರಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ, ಎಸಿಎಸ್‌ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅವರಿಗೆ ಪತ್ರ ಬರೆದು ಸಚಿವಾಲಯಕ್ಕೆ ವಿವರ ಒದಗಿಸುವಂತೆ ಸೂಚಿಸಿದ್ದಾರೆ. 

ನಿಯಮ ಉಲ್ಲಂಘನೆ ಪ್ರಕರಣದಲ್ಲಿ ರೋಡಿಕ್‌ ಕನ್ಸಲ್ಟೆಂಟ್‌ ಕಂಪನಿಯ ಹಿರಿಯ ಹೆದ್ದಾರಿ ಎಂಜಿನಿಯರ್‌ ಹಾಗೂ ಎಕಾಮ್‌ ಏಷ್ಯಾ ಕಂಪನಿಯ ಇಬ್ಬರು ಎಂಜಿನಿಯರ್‌ ಲೋಪ ಎಸಗಿದ್ದಾರೆ ಎಂದು ಕೆನರಾ ವೃತ್ತದ ಸಿಸಿಎಫ್ ಅವರು ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಅರಣ್ಯ ಹಾಗೂ ಹೆದ್ದಾರಿ ಇಲಾಖೆಗಳ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಸಚಿವಾಲಯ ಬೊಟ್ಟು ಮಾಡಿ ತೋರಿಸಿತ್ತು. 

ಹೆದ್ದಾರಿ ಕಾಮಗಾರಿಯ ಒಟ್ಟು ಉದ್ದ 187 ಕಿ.ಮೀ ಆಗಿದೆ. ‘ವಿನ್ಯಾಸ, ನಿರ್ಮಾಣ, ಹಣಕಾಸು ನೆರವು, ನಿರ್ವಹಣೆ ಹಾಗೂ ವರ್ಗಾವಣೆ’ ಮಾದರಿಯಲ್ಲಿ ₹2,600 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಟೋಲ್‌ ಪ್ಲಾಜಾಗೆ ಅರಣ್ಯ ಭೂಮಿ ಬಳಕೆಗೆ ಒಪ್ಪಿಗೆ ನೀಡುವಂತೆ ಹೆದ್ದಾರಿ ಪ್ರಾಧಿಕಾರವು ಪ್ರಸ್ತಾವನೆ ಸಲ್ಲಿಸಿತ್ತು. 

ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ 2019ರ ಆಗಸ್ಟ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ‘ಸೀಬರ್ಡ್‌ ಯೋಜನೆಗಾಗಿ 2,259 ಹೆಕ್ಟೇರ್ ಅರಣ್ಯ ಬಳಕೆಗೆ 1986ರಲ್ಲೇ ಒಪ್ಪಿಗೆ ನೀಡಲಾಗಿತ್ತು. ಹೆದ್ದಾರಿ ವಿಸ್ತರಣೆಗೆ ಹೆದ್ದಾರಿ ಪ್ರಾಧಿಕಾರಕ್ಕೆ 9.13 ಹೆಕ್ಟೇರ್ ಅರಣ್ಯವನ್ನು ರಕ್ಷಣಾ ಇಲಾಖೆಯು 2014ರಲ್ಲಿ ನೀಡಿತ್ತು. ಆದರೆ, ಹೆದ್ದಾರಿ ಪ್ರಾಧಿಕಾರವು 6.68 ಹೆಕ್ಟೇರ್ ಅರಣ್ಯ ಬಳಕೆಗೆ ಮಾತ್ರ ಈ ಹಿಂದೆ ಅನುಮೋದನೆ ಪಡೆದಿತ್ತು. ಇದೀಗ 6 ಎಕರೆ ಅರಣ್ಯ ಬಳಸಲು ಒಪ್ಪಿಗೆ ಕೇಳಿದೆ. ಇದಕ್ಕಾಗಿ ದಾಖಲೆಗಳನ್ನು ಹಾಗೂ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ 1.02 ಹೆಕ್ಟೇರ್ ಪ್ರದೇಶವು ಅರಣ್ಯವಾಗಿ ಉಳಿದಿಲ್ಲ. ಹಾಗಾಗಿ, 1.44 ಹೆಕ್ಟೇರ್ ಅರಣ್ಯ ಬಳಕೆಗೆ ಮಾತ್ರ ಒಪ್ಪಿಗೆ ನೀಡಬೇಕಿದೆ. ಹೆದ್ದಾರಿ ವಿಸ್ತರಣೆ ಹಾಗೂ ನಿರ್ವಹಣೆಗೆ ಟೋಲ್‌ ಪ್ಲಾಜಾ ಅತೀ ಅಗತ್ಯ’ ಎಂದು ವರದಿ ಸಲ್ಲಿಸಿದ್ದರು. ಅರಣ್ಯ ಭೂಮಿ ಬಳಕೆಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಲೋಪ ಎಸಗಿರುವುದು ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT