ಬೆಂಗಳೂರು: ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವನ್ನು ಮತ್ತೆ ಎರಡು ತಿಂಗಳಿಗೆ ಮರು ನೇಮಕ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ, ಆಯೋಗದ ಅಧ್ಯಕ್ಷ ಹಾಗೂ ಎಲ್ಲ ಸದಸ್ಯರನ್ನೂ 2024 ರ ಜನವರಿ 31ರವರೆಗೆ ಮರು ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಆಯೋಗ ಅಧ್ಯಕ್ಷರ ಮೂರು ವರ್ಷಗಳ ಅಧಿಕಾರ ಅವಧಿಯು ಇದೇ 26ಕ್ಕೆ ಮುಕ್ತಾಯವಾಗುತ್ತಿದ್ದು, ಅದರೊಂದಿಗೆ ಇಡೀ ಆಯೋಗದ ಅವಧಿಯೂ ಕೊನೆಯಾಗುತ್ತಿದೆ. ಎಚ್. ಕಾಂತರಾಜ ನೇತೃತ್ವದ ಹಿಂದಿನ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ( ಜಾತಿ ಜನಗಣತಿ) ದತ್ತಾಂಶವನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸುವ ಕೆಲಸದಲ್ಲಿ ಹಾಲಿ ಆಯೋಗ ನಿರತವಾಗಿದೆ.
ಜಾತಿ ಗಣತಿ ವರದಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಎರಡು ಮರು ನೇಮಕದ ಆದೇಶ ಹೊರಬಿದ್ದಿದೆ.