ಕುಣಿಗಲ್: ‘ಜೆಡಿಎಸ್ ಮಂತ್ರಿಗಳ ಬಳಿ ಕಾಡಿಬೇಡಿ ಕೆಲಸ ಮಾಡಿಸುವುದು ನಮ್ಮಿಂದ ಸಾಧ್ಯವಿಲ್ಲ’ ಎಂದು ಶಾಸಕ ಡಾ.ರಂಗನಾಥ ಹೇಳಿದರು.
ಸಚಿವ ಡಿ.ಕೆ.ಶಿವಕುಮಾರ್ ಅವರ ಸಂಬಂಧಿಕರೂ ಆದ ರಂಗನಾಥ್ ಅವರುಪಟ್ಟಣದಲ್ಲಿ ನಡೆದ ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಮಂತ್ರಿಗಳಿಂದ ಕೆಲಸ ಮಾಡಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ನಮ್ಮ ಮನೆಯ ವರೇ ಸಂಸದ ಮತ್ತು ನೀರಾವರಿ ಸಚಿವರಾಗಿದ್ದರೂ ನಮ್ಮ ಕ್ಷೇತ್ರದ ಪಾಲಿನ ಹೇಮಾವತಿ ನೀರನ್ನು ಪಡೆಯಲು ಸಾಧ್ಯವಾಗಿಲ್ಲ. ಪಕ್ಷದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದರು.
ಕಾರ್ಯಕರ್ತರು ‘ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ಪ್ರಬಲ ವೈರಿಯಾದ ಜೆಡಿಎಸ್ ಜತೆ ಮುಂದಿನ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಮುಜುಗರದ ವಿಷಯವಾಗಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆ ಸಮಯದಲ್ಲಿ ಜೆಡಿಎಸ್ ಜತೆ ಬಡಿದಾಡಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಈಗ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಮಾಡುವುದು ಹೇಗೆ, ಪಕ್ಷದಲ್ಲಿ ಬೆಳವಣಿಗೆ ಸಹಿಸದವರು ಕಾರ್ಯಕರ್ತರ ಕಾಲೆಳೆಯುವ ಕೆಲಸ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು.