ವಿಜಯಪುರ: ‘ಸಕ್ಕರೆ ಕಾರ್ಖಾನೆಗಳಿಂದ ಚುನಾವಣೆಗೆ ಹಣ ಸಂಗ್ರಹಿಸುತ್ತಿದ್ದೇನೆ’ ಎಂದು ಆಧಾರ ರಹಿತ ಆರೋಪ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಯತ್ನಾಳ ವಿರುದ್ಧ ಯಾವ ಕ್ರಮಕೈಗೊಳ್ಳಲಿದೆ ಎಂಬ ವಿಶ್ವಾಸ ಇದೆ ಎಂದರು.
‘ಯತ್ನಾಳ ಮಾಡಿರುವ ಆರೋಪ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಸ್ವೀಕರಿಸುತ್ತೇನೆ’ ಎಂದು ಸಚಿವರು ಸವಾಲು ಹಾಕಿದರು.
ಖಂಡನೆ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತದೆ’ ಎಂಬ ಪ್ರಧಾನಿ ಮೋದಿ ಹೇಳಿಕೆ ಖಂಡನೀಯ. ಯುಪಿಎ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹26 ಸಾವಿರ ಇತ್ತು. ಮೋದಿ ಅಧಿಕಾರವಧಿಯಲ್ಲಿ10 ಗ್ರಾಂ ಚಿನ್ನಕ್ಕೆ ₹74 ಸಾವಿರ ಆಗಿದೆ. ಹೆಣ್ಣು ಮಕ್ಕಳು ಬಂಗಾರದ ಬದಲು, ಕಬ್ಬಿಣದ ತಾಳಿಸರ ಮಾಡಿಸಿಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.