ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಕ್ಕೆ ₹316. 63 ಕೋಟಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವ ಗೋವಿಂದ ರಾಜ್‌

ಸರ್ಕಾರಕ್ಕೆ ₹ 7.76 ಲಕ್ಷ ಪಾವತಿಸಲು ಯತೀಂದ್ರ ಬಾಕಿ
Published 4 ಜೂನ್ 2024, 0:11 IST
Last Updated 4 ಜೂನ್ 2024, 0:11 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್‌ ಅವರು ಆದಾಯ ತೆರಿಗೆ ಇಲಾಖೆಗೆ ₹ 316. 63 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ಈ ಸಂಬಂಧ ಮೂರು ಪ್ರಕರಣಗಳು ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿಯಲ್ಲಿದೆ  (ಐಟಿಎಟಿ) ಎಂದು ನಾಮಪತ್ರದ ಜೊತೆಗೆ ಸಲ್ಲಿಸಿದ  ಪ್ರಮಾಣಪತ್ರದಲ್ಲಿ ಅವರು ಘೋಷಿಸಿಕೊಂಡಿದ್ದಾರೆ.

ಆ ಪೈಕಿ, ಆದಾಯ ತೆರಿಗೆ ಪಾವತಿ ಮೊತ್ತ 2013–14ನೇ ಸಾಲಿನ ₹ 73.08 ಲಕ್ಷ, 2014–15ರ ಸಾಲಿನ ₹ 144.39 ಕೋಟಿ, 2016–17ನೇ ಸಾಲಿನ ₹ 171.51 ಕೋಟಿ ಐಟಿಎಟಿಯಲ್ಲಿ ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.

ಗೋವಿಂದರಾಜ್‌ ಅವರು ₹ 3.90 ಕೋಟಿ ಮೊತ್ತದ ಮತ್ತು ತಮ್ಮ ಪತ್ನಿ ಹೆಸರಿನಲ್ಲಿ ₹ 6.54 ಕೋಟಿಯ ಚರಾಸ್ತಿ ಘೋಷಿಸಿಕೊಂಡಿದ್ದಾರೆ. ತಮ್ಮ ಹೆಸರಿನಲ್ಲಿ ₹ 18.58 ಲಕ್ಷ ಮೌಲ್ಯದ ಮತ್ತು ಪತ್ನಿ ಹೆಸರಿನಲ್ಲಿ ₹ 27.01 ಕೋಟಿ ಮೌಲ್ಯದ ಸ್ತಿರಾಸ್ತಿ ಘೋಷಿಸಿದ್ದಾರೆ.

ಸರ್ಕಾರಕ್ಕೆ ₹ 7.76 ಲಕ್ಷ ಪಾವತಿಸಲು ಯತೀಂದ್ರ ಬಾಕಿ

ವಿಧಾನ ಪರಿಷತ್‌ಗೆ ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ₹ 9.23 ಕೋಟಿ ಮೌಲ್ಯ ಚರಾಸ್ತಿ, ₹ 22.65 ಕೋಟಿ ಮೌಲ್ಯದ ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ.

ಯತೀಂದ್ರ ಅವರಿಗೆ ₹ 10.39 ಕೋಟಿ ಸಾಲವಿದೆ. ಅವರು ಜಿಎಸ್‌ಟಿ ಮತ್ತು ಆಸ್ತಿ ತೆರಿಗೆ ಸೇರಿ ಸರ್ಕಾರಕ್ಕೆ ಒಟ್ಟು ₹ 7.76 ಲಕ್ಷ ಪಾವತಿಸಲು ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೆ, ಕೈಯಲ್ಲಿ ₹ 63 ಸಾವಿರ ನಗದು, ಬಿಎಂಡಬ್ಲ್ಯು ಕಾರು ಹೊಂದಿದ್ದಾರೆ.

ಸಿ.ಟಿ. ರವಿ ಆಸ್ತಿ ₹ 7.82 ಕೋಟಿ
ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಸಿ.ಟಿ. ರವಿ ಕುಟುಂಬದ ಬಳಿ ಒಟ್ಟು ₹ 7.82 ಕೋಟಿ ಮೌಲ್ಯದ ಆಸ್ತಿ ಇದೆ. ರವಿ ಅವರು ₹ 2.09 ಕೋಟಿ ಮೌಲ್ಯದ ಚರಾಸ್ತಿ ಮತ್ತು ₹ 2.94 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಅವರ ಪತ್ನಿ ಪಲ್ಲವಿ ರವಿ ಬಳಿ ₹ 1.75 ಕೋಟಿ ಮೌಲ್ಯದ ಚರಾಸ್ತಿ ಮತ್ತು ₹ 1.04 ಕೋಟಿ ಮೌಲ್ಯದ ಸ್ಥಿರಾಸ್ತಿಗಳಿವೆ ಎಂದು ನಾಮಪತ್ರದ ಜತೆಗಿನ ಪ್ರಮಾಣಪತ್ರದಲ್ಲಿ ಘೋಷಿಸಿ ಕೊಂಡಿದ್ದಾರೆ. ಪತಿ ಮತ್ತು ಪತ್ನಿ ಒಟ್ಟು ₹ 2.42 ಕೋಟಿ ಸಾಲ ಹೊಂದಿದ್ದಾರೆ. ರವಿ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ನಾಲ್ಕು ಪ್ರಕರಣಗಳು ಬಾಕಿ ಇವೆ.
ಜವರಾಯಿಗೌಡ ಬಳಿ ₹ 248 ಕೋಟಿ ಆಸ್ತಿ
ವಿಧಾನ ಪರಿಷತ್‌ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಟಿ.ಎನ್‌. ಜವರಾಯಿಗೌಡ ಕುಟುಂಬ ₹ 248.6 ಕೋಟಿ ಮೌಲ್ಯದ ಆಸ್ತಿಗಳನ್ನು ಹೊಂದಿದೆ. ಜವರಾಯಿಗೌಡ ಬಳಿ ₹ 21.84 ಕೋಟಿ ಚರಾಸ್ತಿ ಮತ್ತು ₹ 64.40 ಕೋಟಿ ಸ್ಥಿರಾಸ್ತಿಗಳಿವೆ. ಅವರ ಪತ್ನಿ ಟಿ.ಎ. ಗಾಯತ್ರಿ ₹ 11.17 ಕೋಟಿ ಮೌಲ್ಯದ ಚರಾಸ್ತಿ ಮತ್ತು ₹ 106.72 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಅವಿಭಕ್ತ ಕುಟುಂಬದ ಹೆಸರಿನಲ್ಲಿ ₹ 6.75 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹ 6.08 ಕೋಟಿ ಮೌಲ್ಯದ ಸ್ಥಿರಾಸ್ತಿಗಳಿವೆ. ಕುಟುಂಬದ ಒಡೆತನದಲ್ಲಿರುವ ಸಂತೋಷ್‌ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ ₹ 14.32 ಕೋಟಿ ಚರಾಸ್ತಿ ಮತ್ತು ₹ 17.32 ಕೋಟಿ ಮೌಲ್ಯದ ಸ್ಥಿರಾಸ್ತಿಗಳಿವೆ. ಜವರಾಯಿಗೌಡ ದಂಪತಿ, ಅವಿಭಕ್ತ ಕುಟುಂಬ ಮತ್ತು ಕಂಪನಿ ಸೇರಿದಂತೆ ಒಟ್ಟು ₹ 73.81 ಕೋಟಿ ಸಾಲ ಹೊಂದಿದ್ದಾರೆ. ಸರ್ಕಾರಕ್ಕೆ ₹ 4.38 ಕೋಟಿ ಬಾಕಿ ಪಾವತಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT