ಬೆಂಗಳೂರು: ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಅದೆಷ್ಟೇ ಪ್ರಯತ್ನಿಸಿದರೂ ನಮ್ಮ ಸಾಧನೆಗಳ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕಾಂಗ್ರೆಸ್ ಪೋಸ್ಟ್ ಹಂಚಿಕೊಂಡಿದೆ.
‘ಕಾಂಗ್ರೆಸ್ ಎಪ್ಪತ್ತು ವರ್ಷ ದೇಶದ ಅಭಿವೃದ್ಧಿಗಾಗಿ ಏನೂ ಮಾಡಿಯೇ ಇಲ್ಲ ಎಂದು ಭಾಷಣ ಬಿಗಿಯುತ್ತಲೇ ನಮ್ಮ ಪಕ್ಷ ರಾಷ್ಟ್ರವನ್ನು ಕಟ್ಟಿದ ಸಾಧನೆಗಳನ್ನು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಿಕೊಳ್ಳುತ್ತಿದ್ದಾರೆ‘ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪಿ.ವಿ ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಕಾಂಗ್ರೆಸ್ ಆರ್ಥಿಕ ಕ್ರಾಂತಿ ನಡೆಸಿದ್ದನ್ನು ಬಿಜೆಪಿಯವರು ಹಾಗೂ ಮೋದಿ ಒಪ್ಪಿಕೊಂಡಿದ್ದಾರೆ. ಎಂ.ಎಸ್ ಸ್ವಾಮೀನಾಥನ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಕಾಂಗ್ರೆಸ್ ಅವಧಿಯಲ್ಲಿ ಹಸಿರು ಕ್ರಾಂತಿ ನಡೆದದ್ದನ್ನು ಒಪ್ಪಿಕೊಂಡರೆ, ಮನಮೋಹನ್ ಸಿಂಗ್ರನ್ನು ಅನಿವಾರ್ಯವಾಗಿ ಹೊಗಳುತ್ತಾ ಕಾಂಗ್ರೆಸ್ ಭಾರತವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ದಿದ್ದನ್ನು ಒಪ್ಪಿದ್ದಾರೆ ಎಂದು ಪೋಸ್ಟ್ನಲ್ಲಿ ಕಾಂಗ್ರೆಸ್ ತಿಳಿಸಿದೆ.