ಮೈಸೂರು: ದಸರಾ ನಿಮಿತ್ತ, ಇಲ್ಲಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ. 17ರಂದು ‘ಯುವ ಸಂಭ್ರಮ’ ಆರಂಭವಾಗಲಿದ್ದು, ನಟ ಗಣೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ನಾಡಹಬ್ಬಕ್ಕೆ ಮುನ್ನುಡಿ ಬರೆಯುವ ಈ ಸಂಭ್ರಮ ಸೆ. 26ರವರೆಗೆ ನಡೆಯಲಿದೆ. ರಾಜ್ಯದ ಅಂದಾಜು 260 ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಇದುವರೆಗೆ 8 ದಿನ ನಡೆಯುತ್ತಿದ್ದ ಕಾರ್ಯಕ್ರಮವನ್ನು ಈ ಬಾರಿ 10 ದಿನಗಳಿಗೆ ವಿಸ್ತರಿಸಲಾಗಿದೆ. ನಿತ್ಯ ಸಂಜೆ 5.30ರಿಂದ 10ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಯುವ ದಸರೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ.
‘ಪರಿಸರ, ಅರಣ್ಯ, ಹುಲಿ ಸಂರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಸಮಾನತೆ, ರಾಷ್ಟ್ರೀಯ ಭಾವೈಕ್ಯ, ಪ್ಲಾಸ್ಟಿಕ್ ಮುಕ್ತ ಭಾರತ, ದೇಶಭಕ್ತಿ ಪರಿಕಲ್ಪನೆ ಮೇಲೆ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಯುವ ದಸರೆಯ ಉಪ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.