ಬೆಂಗಳೂರು: ‘ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನನಗೆ ಆಸಕ್ತಿ ಇಲ್ಲ. ನಮ್ಮ ಕುಟುಂಬದವರೂ ಸ್ಪರ್ಧಿಸುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ. ಹೈಕಮಾಂಡ್ ಏನು ಹೇಳುತ್ತದೊ ನೋಡೋಣ’ ಎಂದರು.
ಏಕವ್ಯಕ್ತಿ ಪ್ರದರ್ಶನ: ‘ರಾಮ ಮಂದಿರ ಉದ್ಘಾಟನೆ ಏಕವ್ಯಕ್ತಿಯ ಪ್ರದರ್ಶನ ಆಗುತ್ತಿದೆ. ಲೋಕಸಭಾ ಚುನಾವಣೆ ಬೇರೆ ಬರುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಿಗೆ ಆಹ್ವಾನ ಕೊಡಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಹೊರತುಪಡಿಸಿದರೆ ಬೇರೆ ಯಾವ ಮುಖ್ಯಮಂತ್ರಿಯನ್ನೂ ಆಹ್ವಾನಿಸಿಲ್ಲ’ ಎಂದರು.
ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮುನ್ನೆಚ್ಚರಿಕೆ ಕ್ರಮವಾಗಿ ಹರಿಪ್ರಸಾದ್ ಹೇಳಿದ್ದಾರೆ. ಕೋಮು ಗಲಭೆ ಆಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಆಯಾ ರಾಜ್ಯಗಳು ನಿಗಾ ವಹಿಸಬೇಕು’ ಎಂದೂ ಹೇಳಿದರು.
‘ರಾಜ್ಯದ ಗುತ್ತಿಗೆದಾರರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಕೇಳಿದರೆ ಅದನ್ನು ಒದಗಿಸಲು ಯಾವುದೇ ಅಡ್ಡಿ ಇಲ್ಲ’ ಎಂದೂ ತಿಳಿಸಿದರು.
‘ಅದು ಸರ್ಕಾರದ ದಾಖಲೆ. ಮುಚ್ಚಿಡುವ ಅಗತ್ಯವಿಲ್ಲ. ಆರ್ಟಿಐ ಅರ್ಜಿ ಹಾಕಿದರೆ ದಾಖಲೆ ಕೊಡುತ್ತೇವೆ. ಇನ್ನು ಆದಾಯ ತೆರಿಗೆ ಇಲಾಖೆ ಕೇಳಿದರೆ ಕೊಡುವುದಿಲ್ಲ ಎಂದು ಹೇಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು.