ಬೆಂಗಳೂರು: ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿ ಮಾಧವ್ (70) ಎಂಬುವರನ್ನು ಶುಕ್ರವಾರ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.
‘ಸ್ಥಳೀಯ ನಿವಾಸಿ ಮಾಧವ್, ಪರಿಚಯಸ್ಥರನ್ನು ಮಾತನಾಡಿಸಲುಬೆಳಿಗ್ಗೆ ಮನೆಯಿಂದ ಹೊರಗಡೆ ಹೋಗಿದ್ದರು. ಮಧ್ಯಾಹ್ನ 1.45ರ ಸುಮಾರಿಗೆ ವಾಪಸು ಮನೆಗೆ ಬರುವಾಗ ಮಾರ್ಗ ಮಧ್ಯೆಯೇ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಮಾಧವ್ ಹಾಗೂ ಸಂಬಂಧಿಕರ ನಡುವೆ ಆಸ್ತಿ ಹಂಚಿಕೆ ಸಂಬಂಧ ಕೆಲದಿನಗಳಿಂದ ಮನಃಸ್ತಾಪ ಏರ್ಪಟ್ಟಿತ್ತು. ಜಗಳವೂ ಆಗಿತ್ತು. ಅದುವೇ ಕೃತ್ಯಕ್ಕೆ ಕಾರಣವಿರಬಹುದೆಂಬ ಅನುಮಾನವಿದೆ. ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯುತ್ತಿದ್ದೇವೆ. ಬೇರೆ ಬೇರೆ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ’ ಎಂದರು.
ಸುಪಾರಿ ನೀಡಿ ಹತ್ಯೆ ಶಂಕೆ: ‘ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು, ಮಾಧವ್ ಅವರನ್ನು ಅಡ್ಡಗಟ್ಟಿ ಕೊಲೆ ಮಾಡಿ ಹೋಗಿದ್ದಾರೆ. ಅವರು ಸುಫಾರಿ ಪಡೆದು ಕೃತ್ಯ ಎಸಗಿರುವ ಶಂಕೆಯೂ ಇದೆ’ ಎಂದು ಅಧಿಕಾರಿ ಹೇಳಿದರು.
‘ಘಟನಾ ಸ್ಥಳ ಹಾಗೂ ಅಕ್ಕ–ಪಕ್ಕದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದರು.