ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ಬಿಡದಿಯ ತನ್ನ ಕಾರು ತಯಾರಿಕಾ ಸ್ಥಾವರದಲ್ಲಿ ಆರಂಭಿಸಲಿರುವ ಮೂರನೇ ಘಟಕಲ್ಲೆ ₹ 3,300 ಕೋಟಿ ಹೂಡಿಕೆ ಮಾಡುತ್ತಿದೆ.
ಜಪಾನ್ನ ಟೊಯೊಟಾ ಮೋಟರ್ ಕಾರ್ಪೊರೇಷನ್ನ ಭಾರತದ ಅಂಗಸಂಸ್ಥೆಯಾದ ಟೊಯೊಟಾ ಕಿರ್ಲೋಸ್ಕರ್ ಈ ಸಂಬಂಧ ರಾಜ್ಯ ಸರ್ಕಾರದ ಜತೆ ಮಂಗಳವಾರ ಒಪ್ಪಂದ ಮಾಡಿಕೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಟೊಯೊಟಾ ವ್ಯವಸ್ಥಾಪಕ ನಿರ್ದೇಶಕ ಮಸಕಾಜು ಯೋಶಿಮುರಾ ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು.
ಬಿಡದಿಯ ಕಾರು ತಯಾರಿಕಾ ಘಟಕ ವರ್ಷಕ್ಕೆ 3.10 ಲಕ್ಷ ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ, ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ₹4,100 ಕೋಟಿ ಹೂಡಿಕೆ ಘೋಷಿಸಿತ್ತು. ಮೂರನೇ ಘಟಕ ಸ್ಥಾಪನೆಯಿಂದ ವರ್ಷಕ್ಕೆ ಒಂದು ಲಕ್ಷ ಹೆಚ್ಚುವರಿ ವಾಹನ ತಯಾರಿಕೆ ಸಾಧ್ಯವಾಗಲಿದೆ. ಘಟಕ ವಿಸ್ತರಣೆಯ ಫಲವಾಗಿ 2 ಸಾವಿರ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಲಿದೆ.
ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಮೇಲೆ ₹25 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸಲಾಗಿದೆ. ₹50 ಸಾವಿರ ಕೋಟಿ ಹೂಡಿಕೆ ಆಕರ್ಷಿಸುವ ಗುರಿ ಇದೆ. ಇದರಿಂದ ರಾಜ್ಯದಲ್ಲಿ ಒಂದು ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿವೆ. ರಾಜ್ಯದಲ್ಲಿ 2 ಲಕ್ಷ ವಾಹನಗಳು (ಇವಿ) ನೋಂದಣಿಯಾಗಿವೆ. ಇವಿ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕವನ್ನು ಪ್ರಮುಖ ತಾಣವಾಗಿಸಲು ಹೊಸ ಶುದ್ಧ ಸಂಚಾರ (ಕ್ಲೀನ್ ಮೊಬಿಲಿಟಿ) ನೀತಿಯನ್ನು ರಾಜ್ಯ ಸರ್ಕಾರ ಹೊರತರಲಿದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಿರ್ಲೋಸ್ಕರ್ ಸಿಸ್ಟಮ್ಸ್ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.