ಬಳ್ಳಾರಿ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ತಡೆಗೆ ಕಠಿಣ ಕಾನೂನು ರೂಪಿಸುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.
‘ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳಿಗೆ ಕೂಡಲೇ ಶಿಕ್ಷೆ ವಿಧಿಸುವಂತಾಗಬೇಕು. ಈ ಕುರಿತ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಅತ್ಯಾಚಾರಿಗಳಿಗೆ ಎಚ್ಚರಿಕೆ ನೀಡಬೇಕು’ ಎಂದು ಘಟಕದ ಅಧ್ಯಕ್ಷೆ ಬಿ.ಸುಮಾರೆಡ್ಡಿ ಆಗ್ರಹಿಸಿದರು.
‘ದೇಶದಾದ್ಯಂತ ಪ್ರತಿ 36 ನಿಮಿಷಕ್ಕೆ ಒಬ್ಬ ಮಹಿಳೆ ಅತ್ಯಾಚಾರಕ್ಕೆ ಒಳಗಾಗುತ್ತಿರುವುದಾಗಿ ಅಂಕಿ– ಅಂಶಗಳು ತಿಳಿಸಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ವರ್ಷ ಇದುವರೆಗೆ ಮಹಿಳೆಯರ ಮೇಲಿನ ದೌರ್ಜನ್ಯದ 30,942 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಈ ವರ್ಷ 500ಕ್ಕೂ ಅಧಿಕ ಪ್ರಕರಣಗಳು ನಡೆದಿವೆ. ಈ ದುರ್ಘಟನೆಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೀಘ್ರ ಕ್ರಮ ಜರುಗಿಸಬೇಕು’ ಎಂದು ಅವರು ಕೋರಿದರು.
ನಗರ ಘಟಕದ ಅಧ್ಯಕ್ಷೆ ವಿ.ಶರಣಮ್ಮ, ಶಿವಕೃಷ್ಣಾ, ಹಗರಿ ಬೊಮ್ಮನಹಳ್ಳಿಯ ನಿರ್ಮಲಾ ಮೆಣಸಗಿ, ಹೂವಿನ ಹಡಗಲಿಯ ಪುಷ್ಪಾ, ಸುಜಾತಾ, ಲಲಿತಾ ಹೂಗಾರ್, ನಾಗವೇಣಿ, ಚೆನ್ನವೀರಮ್ಮ, ಚಾಮುಂಡಿ, ಬಸಮ್ಮ, ಗೌರಮ್ಮ, ಮುಖಂಡರಾದ ಬಿ.ಬಾಲರಾಜು, ಜಗದೀಶ ಶರ್ಮ, ಸುಧಾಕರ ರೆಡ್ಡಿ, ಕೃಷ್ಣ, ರಾಮಚಂದ್ರಯ್ಯ, ಕೆ.ಎ. ವೇಮಣ್ಣ, ಕುಂದಾಪುರ ನಾಗರಾಜ್ ಇದ್ದರು.