ಸಂಡೂರು: ಇಲ್ಲಿನ ನಂದಿಹಳ್ಳಿ ಸಮೀಪ ತಮಿಳುನಾಡು ಮೂಲದ ಪಿ.ಕೆ.ಪೊನ್ನುರಾಜ್ ಮಾಲೀಕತ್ವದ ಪಿ.ಕೆ.ಪಿ. ಮೈನಿಂಗ್ ಕಂಪೆನಿ ಸ್ಟಾಕ್ ಯಾರ್ಡ್ನಲ್ಲಿ ಸಂಗ್ರಹಿಸಿರುವ ಕಬ್ಬಿಣದ ಅದಿರನ್ನು ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳ ತಂಡವು ಶುಕ್ರವಾರ ಪರಿಶೀಲಿಸಿತು.
ತಾಲ್ಲೂಕಿನ ಹಲವು ಗಣಿ ಪ್ರದೇಶಗಳಲ್ಲಿ ಎರಡು ದಿನಗಳವರೆಗೆ ಈ ತನಿಖೆ ಮುಂದುವರಿಯಲಿದೆ. ವಿವಿಧ ಕಂಪೆನಿಗಳ ಸ್ಟಾಕ್ ಯಾರ್ಡ್ ಹಾಗೂ ಗಣಿ ಅದಿರು ತೆಗೆಯುವ ಸ್ಥಳದ ಮಾಹಿತಿಯನ್ನೂ ಈ ತಂಡ ಪಡೆದುಕೊಳ್ಳಲಿದೆ.
ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಅದಿರು ಸಾಗಣೆ ಕುರಿತು ಮಾರ್ಚ್ನಲ್ಲಿ ನೀಡಲಿದ್ದಾರೆ ಎನ್ನಲಾಗುವ ವರದಿಗೆ ಪೂರಕವಾಗಿ ಈ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಲೋಕಾಯುಕ್ತ ಡಿ.ಎಫ್.ಒ. ಉದಯಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತನಿಖಾ ತಂಡದ ವೀರಭದ್ರಪ್ಪ, ಹೊಸಪೇಟೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಮಲಿಂಗಂ, ಸಂಡೂರು ವಲಯದ ಅರಣ್ಯಾಧಿಕಾರಿಗಳು ತನಿಖಾ ತಂಡದಲ್ಲಿದ್ದಾರೆ.