ಧಾರವಾಡ: ಅನುದಾನ ಬಿಡುಗಡೆ ಕುರಿತು ಸರ್ಕಾರದ ಆದೇಶ ಗುರುವಾರ ಇಲ್ಲಿನ ಶಿಕ್ಷಕರಿಗೆ ತಲುಪಿದ್ದು, ಇದರಿಂದಾಗಿ ಅನುದಾನಕ್ಕೆ ಆಗ್ರಹಿಸಿ ಬುಧವಾರ ಮಾಜಿ ಸಚಿವ ಹೊರಟ್ಟಿ ನೇತೃತ್ವದಲ್ಲಿ ಆರಂಭಿಸಿದ್ದ `ಬೆಂಗಳೂರು ಚಲೋ~ ಪಾದಯಾತ್ರೆ ರದ್ದುಗೊಂಡಿದೆ.
ಅನುದಾನ ಬಿಡುಗಡೆಗಾಗಿ ಆಗ್ರಹಿಸಿ 71 ದಿನಗಳಿಂದ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕರ ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.
ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಪಣ ಜೈನ್ ಭೇಟಿ ನೀಡಿ, ಶಿಕ್ಷಕರಿಗೆ ಹಣ್ಣಿನ ರಸ ಕುಡಿಸಿ, ಆದೇಶದ ಪ್ರತಿಯನ್ನು ನೀಡಿದರು. ಧಾರವಾಡದಿಂದ ವರೂರುವರೆಗೆ ಸುಮಾರು 38 ಕಿ.ಮೀ. ದೂರ ಕ್ರಮಿಸಿದ್ದ ಪಾದಯಾತ್ರೆಯನ್ನು ಮೊಟಕುಗೊಳಿಸಿ ಬಸವರಾಜ ಹೊರಟ್ಟಿ ವಾಪಸು ಬಂದರು.