ಕೆಜಿಎಫ್: ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವೈ.ರಾಮಕ್ಕ ವಿರುದ್ಧ ಅವರ ಪುತ್ರ ವೈ.ರವಿ ಕಣಕ್ಕೆ ಇಳಿದಿದ್ದಾರೆ.
ಹಾಲಿ ಶಾಸಕ ವೈ.ಸಂಪಂಗಿ ಅವರಿಗೆ ಟಿಕೆಟ್ ನೀಡದ ಕಾರಣ ಅವರ ತಾಯಿ ರಾಮಕ್ಕನವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಶಾಸಕರು ಸ್ಪರ್ಧೆಗೆ ಇಳಿಯಲಿಲ್ಲ. ಆದರೆ ಶಾಸಕರು ತಾಯಿ ಪರವಾಗಿ ಚುನಾವಣೆ ಪ್ರಚಾರ ಶುರು ಮಾಡಿದ್ದಾರೆ. ಆದರೆ ರಾಮಕ್ಕರವರ ಮತ್ತೊಬ್ಬ ಪುತ್ರ ವೈ.ರವಿ ತಾಯಿ ವಿರುದ್ಧವೇ ಸ್ಪರ್ಧೆಯಲ್ಲಿದ್ದಾರೆ.
ರಾಮಕ್ಕ ನಾಮಪತ್ರ ತಿರಸ್ಕೃತಗೊಂಡರೆ ಅವರ ಬದಲಿಗೆ ಕುಟುಂಬದವರು ಮತ್ತೊಬ್ಬರು ಇರಲಿ ಎಂದು ವೈ.ರವಿ ನಾಮಪತ್ರ ಸಲ್ಲಿಸಿದ್ದರು ಎಂದು ಶಾಸಕರ ಆಪ್ತರು ಹೇಳುತ್ತಿದ್ದರು. ಆದರೆ ನಾಮಪತ್ರ ವಾಪಸ್ ಪಡೆಯಲು ಎರಡು ದಿನ ಕಾಲಾವಕಾಶವಿದ್ದರೂ ವೈ.ರವಿ ವಾಪಸ್ ಪಡೆಯಲಿಲ್ಲ.
ವೈ.ರವಿ ಉದ್ದೇಶಪೂರ್ವಕವಾಗಿಯೇ ನಾಮಪತ್ರ ವಾಪಸ್ ಪಡೆಯಲಿಲ್ಲವೇ ಅಥವಾ ಬೇರೆ ಯಾವುದೋ ರಾಜಕೀಯ ಉದ್ದೇಶದಿಂದ ಸ್ಪರ್ಧೆಯಲ್ಲಿದ್ದಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಪ್ರಚಾರಕ್ಕೆ ಇಳಿಯುತ್ತಾರೆ ಎಂಬುದು ಕುತೂಹಲ ಹುಟ್ಟಿಸಿದೆ.