ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಇಬ್ಬರು ಅಭ್ಯರ್ಥಿಗಳ ಉಮೇದುವಾರಿಕೆ ತಿರಸ್ಕೃತಗೊಂಡಿದೆ.
ಸೋಮವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ ಕೆ. ಬಲರಾಮು ಹಾಗೂ ಪಕ್ಷೇತರ ಅಭ್ಯರ್ಥಿ ಬಿ.ಎನ್. ಲೋಕೇಶ್ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.
ನಾಮಪತ್ರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಎಂದು ಗುರುತು ಮಾಡಿದ್ದ ಬಲರಾಮು ಅವರು `ಎ' ಮತ್ತು `ಬಿ' ಫಾರಂ ಒದಗಿಸುವಲ್ಲಿ ವಿಫಲರಾಗಿದ್ದರು. ಅಲ್ಲದೇ, ನಿಗದಿತ ಸಂಖ್ಯೆಯ ಸೂಚಕರ ಸಹಿ ಇಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿದೆ. ಕೆ.ಎಸ್. ದೊರೆಸ್ವಾಮಿ ಅವರಿಗೆ ಬಿಜೆಪಿಯ `ಬಿ' ಫಾರಂ ದೊರೆತಿದ್ದು, ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಇನ್ನು ಪಕ್ಷೇತರ ಅಭ್ಯರ್ಥಿ ಬಿ.ಎನ್. ಲೋಕೇಶ್, ನಿಗದಿತ ನಮೂನೆಯಲ್ಲಿ ಅಫಿಡವಿಟ್ ಸಲ್ಲಿಸದೇ ಇದುದ್ದರಿಂದ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ. ಸಲ್ಲಿಕೆಯಾಗಿದ್ದ ಒಟ್ಟು 14 ನಾಮಪತ್ರಗಳ ಪೈಕಿ 12 ನಾಮಪತ್ರಗಳು ಸಿಂಧುವಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ತಿಳಿಸಿದ್ದಾರೆ.