ಬೆಂಗಳೂರು: ‘ಹಣದ ಹೊಳೆ ಹರಿಯುವ ಸಂಸ್ಥೆಗಳಿಗೆ ಅಧ್ಯಕ್ಷರನ್ನು ಸರ್ಕಾರ ಶೀಘ್ರ ನೇಮಕ ಮಾಡುತ್ತದೆ. ಆದರೆ, ವಿವಿಧ ಅಕಾಡೆಮಿಗಳಿಗೆ 2 ವರ್ಷಗಳಿಂದ ಅಧ್ಯಕ್ಷರನ್ನೇ ನೇಮಿಸಿಲ್ಲ. ಇವರಿಗೆ ಬೆಂಕಿ ಹಾಕ’ ಎಂದು ಹಿರಿಯ ಕವಿ ಕೆ.ಎಸ್.ನಿಸಾರ್ ಅಹಮದ್ ಅವರು ರಾಜ್ಯ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ನಯನ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಹಿತ್ಯ ಅಕಾಡೆಮಿ, ಯಕ್ಷಗಾನ ಮತ್ತಿತರ ಅಕಾಡೆಮಿಗಳ ಅಧ್ಯಕ್ಷರ ನೇಮಕಕ್ಕೆ ವಿಳಂಬ ಮಾಡಲಾಗುತ್ತಿದೆ. ಎಲ್ಲ ಅಕಾಡೆಮಿಗಳಿಗೆ ಕೂಡಲೇ ಅಧ್ಯಕ್ಷರನ್ನು ನೇಮಿಸಬೇಕು’ ಎಂದು ಅವರು ಒತ್ತಾಯಿಸಿದರು. ಹಿರಣ್ಯಾಕ್ಷ ಮನೋಭಾವ: ರಾವಣ ಸೀತೆಯ ಮೇಲೆ ಮಾತ್ರ ಕಣ್ಣು ಹಾಕಿದ. ಆದರೆ, ಹಿರಣ್ಯಾಕ್ಷ ಭೂಮಂಡಲವನ್ನೇ ಕಬಳಿಸಬೇಕು ಎಂಬ ಮನೋಭಾವ ಬೆಳೆಸಿಕೊಂಡಿದ್ದ. ಸಮಾಜದಲ್ಲಿ ಈಗ ಹಿರಣ್ಯಾಕ್ಷ ಮನೋಭಾವ ಹೆಚ್ಚುತ್ತಿದೆ ಎಂದು ನಿಸಾರ್ ಕಳವಳ ವ್ಯಕ್ತಪಡಿಸಿದರು.
ಸಾತ್ವಿಕ ಕೋಪ: ಪರಂಪರೆಯಲ್ಲಿ ಕಾಲೂರಿ ಆಧುನಿಕತೆ ಕಡೆಗೆ ನೋಡಿದವರು ಎಚ್ಎಸ್ವಿ. ಯಾವ ಕವಿಯ ಬಗ್ಗೆಯೂ ಕೇವಲವಾಗಿ ಮಾತನಾಡಿದವರು ಅಲ್ಲ. ಅವರದ್ದು ಸಾತ್ವಿಕ ಕೋಪ. ಹೇಳುವುದನ್ನು ನಿರ್ಭಿಡೆಯಿಂದ ಹೇಳುತ್ತಾರೆ. ಅವರು ಲೋಕಾನುಭವ, ಭಾವಾನುಭವದಿಂದ ಸೃಜನಶೀಲತೆಯಿಂದ ಕಾವ್ಯದ ಮೂಲಕ ಪ್ರತಿಪಾದಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
‘ಹಿರಿಯ ಕವಿ ಬಿ.ಆರ್. ಲಕ್ಷ್ಮಣ ರಾವ್ ಹಾಗೂ ಎಚ್ಎಸ್ವಿ ಅವರು ನನ್ನ ಪ್ರೀತಿಯ ಶಿಷ್ಯರು. ಲಕ್ಷ್ಮಣ ರಾವ್ ಅವರ ವ್ಯಕ್ತಿತ್ವ ತುಂಟತನದಿಂದ ಕೂಡಿದ್ದು. ಎಚ್ಎಸ್ವಿ ವ್ಯಕ್ತಿತ್ವ ಗಂಭೀರ. ಅವರು ಅಂತರ್ಮುಖಿ. ಅವರ ಕಾವ್ಯ ಪ್ರಶಾಂತವಾಗಿ, ನದಿ ಹರಿಯುವ ರೀತಿ ಹರಿಯುತ್ತದೆ’ ಎಂದು ಬಣ್ಣಿಸಿದರು.
ಹಿರಿಯ ವಿದ್ವಾಂಸ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿನಂದನಾ ಭಾಷಣ ಮಾಡಿ, ‘ತುಂಬಿ ತುಳುಕುವ ವಿನಯ, ಹೃದಯ ತುಂಬಿದ ಭಾವನೆಗಳು, ಬಾಯಿ ತುಂಬಾ ಪ್ರಿಯವಾದ ಮಾತು, ಸದಾ ಮುಗುಳ್ನಗೆ ಎಚ್ಎಸ್ವಿ ವ್ಯಕ್ತಿತ್ವದ ಕುರುಹುಗಳು’ ಎಂದರು.
‘ಬಡವಾಡೆಯಾಗದ ರಸೀದಿ ಕಾವ್ಯದ ಮೂಲಕ ಲಕ್ಕೂರು ಆನಂದ ಅವರ ಅಂತರಂಗದ ತಳಮಳಗಳನ್ನು ಗ್ರಹಿಸಬಹುದು. ಅವರ ಭಾವ ಪ್ರಪಂಚದ ಪರಿಚಯ ಆಗುತ್ತದೆ’ ಎಂದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಎಚ್.ಎಸ್.ವೆಂಕಟೇಶಮೂರ್ತಿ ಹಾಗೂ ಲಕ್ಕೂರು ಸಿ.ಆನಂದ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ ಸನ್ಮಾನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.