ಬೆಂಗಳೂರು: ಹಿರಿಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರನ್ನು ರಾಜ್ಯ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ(ಸಿ.ಜೆ) ನೇಮಕ ಮಾಡಲಾಗಿದೆ.
ರಮೇಶ್ ಅವರು ಸದ್ಯ ಕರ್ನಾಟಕ ಹೈಕೋರ್ಟ್ನ ಅತ್ಯಂತ ಹಿರಿಯ ನ್ಯಾಯಮೂರ್ತಿ. ಇದೇ 10ರಿಂದ ಅವರು ಹಂಗಾಮಿ ಸಿ.ಜೆ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಹಾಲಿ ಸಿ.ಜೆ ಸುಬ್ರೊ ಕಮಲ್ ಮುಖರ್ಜಿ ಇದೇ 9ರಂದು ನಿವೃತ್ತಿಯಾಗುತ್ತಿದ್ದಾರೆ.
ಬೀಳ್ಕೊಡುಗೆ ಇಲ್ಲ: ‘ಮುಖರ್ಜಿ ಅವರ ಆಡಳಿತಾವಧಿಯಲ್ಲಿ ರಾಜ್ಯ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ’ ಎಂದು ಆರೋಪಿಸಿರುವ ರಾಜ್ಯ ವಕೀಲರ ಪರಿಷತ್, ‘ಮುಖರ್ಜಿ ಅವರಿಗೆ ಅಧಿಕೃತ ಬೀಳ್ಕೊಡುಗೆ ನೀಡುತ್ತಿಲ್ಲ’ ಎಂದು ಪರಿಷತ್ ಸಹ ಕಾರ್ಯದರ್ಶಿ ವೈ.ಆರ್.ಸದಾಶಿವ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಯೂ ಮುಖರ್ಜಿ ಅವರಿಗೆ ಬೀಳ್ಕೊಡುಗೆ ನೀಡದಿರಲು ತೀರ್ಮಾನಿಸಿದೆ.