ನವದೆಹಲಿ, (ಪಿಟಿಐ): ಕನ್ನಡದ ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ‘ಮಂದ್ರ’ ಕಾದಂಬರಿ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ’ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕೆ.ಕೆ.ಬಿರ್ಲಾ ಪ್ರತಿಷ್ಠಾನ ಸ್ಥಾಪಿಸಿರುವ ಈ ಪ್ರಶಸ್ತಿ 7.50 ಲಕ್ಷ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಭಾರತದ ನಿವೃತ್ತ ನ್ಯಾಯಮೂರ್ತಿ ಜಿ.ಬಿ.ಪಟ್ನಾಯಕ್ ನೇತೃತ್ವದ ಆಯ್ಕೆ ಸಮಿತಿ ಭೈರಪ್ಪ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
2000- 09 ನಡುವೆ ಪ್ರಕಟವಾದ 22 ಭಾರತೀಯ ಭಾಷೆಗಳ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಆಯ್ಕೆ ಸಮಿತಿ ಭೈರಪ್ಪ ಅವರ ‘ಮಂದ್ರ’ ಕಾದಂಬರಿಯನ್ನು 20ನೇ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿಗೆ ಆಯ್ಕೆ ಮಾಡಿತು.