ಬೆಂಗಳೂರು: ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ನೇರ ನೇಮಕಾತಿಯಲ್ಲಿ ಶೇ 5ರಷ್ಟು ಹುದ್ದೆಗಳನ್ನು ಮೀಸಲಿಡುವ ನಿಯಮಗಳಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಯಾವುದಾದರೂ ಹುದ್ದೆಗೆ ಏಳನೇ ತರಗತಿ ವಿದ್ಯಾರ್ಹತೆಯಾಗಿದ್ದು, ಅರ್ಜಿ ಹಾಕುವ ಅಭ್ಯರ್ಥಿ ಅಲ್ಲಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದರೆ ಅಂತಹವರಿಗೂ ಮೀಸಲು ಸೌಲಭ್ಯ ದೊರೆಯಲಿದೆ.
ಕನ್ನಡ ಮಾಧ್ಯಮ ಮೀಸಲಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗಿದ್ದರೆ 10ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿರಬೇಕಿತ್ತು. ಕನಿಷ್ಠ ವಿದ್ಯಾರ್ಹತೆ ಏಳನೇ ತರಗತಿ ಎಂದು ನಿಗದಿಪಡಿಸಿದ್ದ ಹುದ್ದೆಗಳಿಗೆ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿಲ್ಲ ಎಂಬ ಕಾರಣಕ್ಕೆ ಅವಕಾಶ ನಿರಾಕರಿಸಲಾಗುತ್ತಿತ್ತು. ಅದನ್ನು ತಪ್ಪಿಸಲು ಸರ್ಕಾರ ಈ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.
ಕರ್ನಾಟಕದ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಈ ಹಿಂದೆ ಅವಕಾಶ ಇತ್ತು. ಆದರೆ, ಹೊಸ ಸುತ್ತೋಲೆ ಅನ್ವಯ, ದೇಶದ ಯಾವುದೇ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಇನ್ನು ಮುಂದೆ ಅರ್ಜಿ ಸಲ್ಲಿಸಬಹುದು. ಇದರಿಂದಾಗಿ ಕರ್ನಾಟಕದ ಗಡಿಯಲ್ಲಿರುವ ಕನ್ನಡ ಶಾಲೆಗಳಲ್ಲಿ ಓದಿದ ಹೊರರಾಜ್ಯಗಳ ಕನ್ನಡಿಗರಿಗೂ ಉದ್ಯೋಗಾವಕಾಶ ಸಿಗಲಿದೆ.