ಚೆನ್ನೈ (ಪಿಟಿಐ): ಕಾವೇರಿ ನದಿ ನೀರಿನ ಅಂತಿಮ ತೀರ್ಪನ್ನು ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ತಕ್ಷಣ ಹೊರಡಿಸಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿ ಅವರಿಗೆ ಈ ವಾರದಲ್ಲಿ ಮತ್ತೊಂದು ಪತ್ರ ಬರೆದು ಒತ್ತಡ ಹೇರಿದ್ದಾರೆ.
ಈ ವರ್ಷ ಮಳೆ ಕೊರತೆಯಿಂದ ಬಳಲುತ್ತಿರುವ ತಮಿಳುನಾಡಿಗೆ ಬಿಡಬೇಕಿದ್ದ ನೀರನ್ನು ಕರ್ನಾಟಕ ಬಿಟ್ಟಿಲ್ಲ. ಕಾವೇರಿ ತನಗೆ ಮಾತ್ರ ಸೇರಿದ್ದು ಎಂಬಂತೆ ಕಾವೇರಿ ನೀರನ್ನೆಲ್ಲಾ ಕರ್ನಾಟಕ ಬಳಸಿಕೊಂಡಿದೆ ಎಂದು ಜಯಲಲಿತಾ ಪತ್ರದಲ್ಲಿ ಆರೋಪಿಸಿದ್ದಾರೆ.
ಅಲ್ಲದೆ ಕಾವೇರಿ ಜಲವಿವಾದದ ಬಗ್ಗೆ ನ್ಯಾಯಮಂಡಳಿಯು 2007ರಲ್ಲಿ ನೀಡಿರುವ ಅಂತಿಮ ತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.