ಬೆಂಗಳೂರು: ಹೃದಯದ ಕವಾಟ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಎಚ್.ಡಿ.ಕುಮಾರಸ್ವಾಮಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪತ್ನಿ ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.
‘ಕುಮಾರಸ್ವಾಮಿ ಭಾನುವಾರ ಬೆಳಿಗ್ಗೆ ಉಪಾಹಾರ ಸೇವಿಸಿ, ಕಾಫಿ ಕುಡಿದಿದ್ದಾರೆ. ಏಳು ದಿನಗಳಲ್ಲಿ ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ’ ಎಂದು ಅನಿತಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಮುಂದಿನ 15 ದಿನಗಳವರೆಗೆ ಅವರು ಯಾರನ್ನೂ ಭೇಟಿ ಮಾಡುವುದಿಲ್ಲ. ಸಂಪೂರ್ಣ ವಿಶ್ರಾಂತಿಯಲ್ಲಿ ಇರುತ್ತಾರೆ’ ಎಂದೂ ಅವರು ತಿಳಿಸಿದ್ದಾರೆ.
ನಿಮ್ಮ ಪ್ರೀತಿಗೆ ಸದಾ ಋಣಿ: ಕುಮಾರಸ್ವಾಮಿ
’ನನ್ನ ಬಗ್ಗೆ ನಾಡಿನ ಜನತೆ ತೋರಿಸುತ್ತಿರುವ ಕಾಳಜಿಯಿಂದ ಮನಸ್ಸು ತುಂಬಿ ಬಂದಿದೆ. ಇಂತಹ ಪ್ರೀತಿಗೆ ಪಾತ್ರನಾಗಿರುವುದರಿಂದ ಜನರ ಸೇವೆಯನ್ನು ಇನ್ನೂ ಹೆಚ್ಚು ಕಳಕಳಿಯಿಂದ ಮಾಡುವ ಉತ್ಸಾಹ ಇಮ್ಮಡಿಸಿದೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
’ನನ್ನ ಹೃದಯ ಚಿಕಿತ್ಸೆಯ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ’ ಎಂದು ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.