ಚಾಮರಾಜನಗರ: ‘ಸದನ, ಶಾಸಕರು ಮತ್ತು ಮಾಧ್ಯಮದ ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು ರಾಜೀನಾಮೆ ನೀಡಬೇಕು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಲ್ಲಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ವಿಧಾನಸಭೆಯ ಅಧ್ಯಕ್ಷರಾಗಿ ಕೋಳಿವಾಡ ಅವರು ಮಾಧ್ಯಮದ ವಿರುದ್ಧ ಧೋರಣೆ ಹೊಂದಿರುವುದು ಸರಿಯಲ್ಲ. ಇದರಿಂದ ಪ್ರಜಾತಂತ್ರ ವ್ಯವಸ್ಥೆಗೆ ಅಗೌರವ ಉಂಟಾಗಿದೆ’ ಎಂದು ಹೇಳಿದರು.
‘ಹಕ್ಕುಚ್ಯುತಿ ವಿಚಾರ ಬಂದಾಗ ಸದನದಲ್ಲಿ ಗಂಭೀರ ಚರ್ಚೆ ನಡೆದು ತೀರ್ಮಾನ ತೆಗೆದುಕೊಳ್ಳಬೇಕು. ಈ ಹಿಂದೆ ಪತ್ರಕರ್ತ ಪಿ.ಲಂಕೇಶ್ ಅವರ ಪ್ರಕರಣದಲ್ಲಿ ಹಕ್ಕುಚ್ಯುತಿಯಾಗಿದೆ ಎಂದು ಸದನದ ಎಲ್ಲ ಸದಸ್ಯರೂ ಒಂದಾಗಿ ತೀರ್ಮಾನಿಸಿದ್ದರು. ನಾನು ಅದನ್ನು ವಿರೋಧಿಸಿದ್ದೆ. ನನ್ನ ಮಾತನ್ನು ಇಡೀ ಸದನ ಒಪ್ಪಿಕೊಂಡಿತ್ತು’ ಎಂದರು.
‘ಹಕ್ಕು ಬಾಧ್ಯತಾ ಸಮಿತಿ ರಚಿಸಲು ಕೋಳಿವಾಡ ಅವರಿಗೆ ಯಾವ ಅಧಿಕಾರವಿದೆ? ಅವರು ಸಭಾಧ್ಯಕ್ಷರಾಗಿ ಮುಂದುವರಿಯಲು ನಾಲಾಯಕ್ಕು’ ಎಂದು ಟೀಕಿಸಿದರು.
ತಮಿಳುನಾಡಿಗೆ ನೀರು- ವಿರೋಧ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದು ಅಕ್ಷಮ್ಯ ಎಂದು ವಾಟಾಳ್ ನಾಗರಾಜ್ ಹೇಳಿದರು.