ಚಿತ್ರದುರ್ಗ: ‘ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳನ್ನು ಕೊರೆಸುವಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿಲ್ಲ. ಈ ಕುರಿತು ಯಾವುದೇ ತನಿಖೆಗೆ ಸಿದ್ಧ’ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಎಚ್. ಆಂಜನೇಯ ಸ್ಪಷ್ಟಪಡಿಸಿದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಅವರು ಆರೋಪ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಸಿಬಿಐ ಸೇರಿದಂತೆ ಹಲವು ತನಿಖಾ ಏಜೆನ್ಸಿಗಳಿವೆ. ಯಾವ ಸಂಸ್ಥೆಯಿಂದ ಬೇಕಾದರೂ ತನಿಖೆ ಮಾಡಿಸಲಿ’ ಎಂದು ಸವಾಲು ಹಾಕಿದರು.
‘ಈ ಪ್ರಕರಣದ ಅವರಗೊಂದಿಗೆ ಚರ್ಚೆ ನಡೆಸಲು ನನಗೆ ಸಮಯವಿಲ್ಲ. ಹಾಗೆಯೇ, ಅವರು ಚರ್ಚೆಗೆ ಆಹ್ವಾನಿಸುವಷ್ಟು ದೊಡ್ಡವರೂ ಅಲ್ಲ. ನನಗೆ ಇಂಥ ಚರ್ಚೆಗಿಂತ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬಿಜೆಪಿ ಆಡಳಿತದ ಅವಧಿಯಲ್ಲಿ ಭೂ ಖರೀದಿಗೆ ಸಂಬಂಧಿಸಿದಂತೆ ಆ ಪಕ್ಷದ ನಾಯಕರ ವಿರುದ್ಧ ಸಾಕಷ್ಟು ಆರೋಪ, ಪ್ರಕರಣಗಳಿವೆ. ಅವುಗಳಿಂದ ಮೊದಲು ಹೊರ ಬಂದು, ಬೇರೆಯವರನ್ನು ಪ್ರಶ್ನಿಸಲಿ’ ಎಂದರು.