ಹಾಸನ : ‘ಜಗತ್ತಿನ ಎರಡು ಅದ್ಭುತ ಶಕ್ತಿಗಳು ಶೀಘ್ರ ನಾಶವಾಗಲಿವೆ. ಭಾರತದ ಗಡಿಯಲ್ಲಿ ಮದ್ದು ಗುಂಡುಗಳು ಮೊಳಗುತ್ತವೆ. ಸಹಸ್ರಾರು ಜನರು ವಿಷಗಾಳಿ ಸೇವಿಸಿ ಸಾಯುತ್ತಾರೆ’ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಾಳೆ ಬಾಗಿತು, ಸುಖ–ದು:ಖಗಳು ಸಮವಾಗಿ ತೂಗಿತು, ಗಡಿಯಲ್ಲಿ ಮದ್ದು ಗುಂಡುಗಳು ಅಬ್ಬರಿಸಿ ವಿಷಗಾಳಿ ಹರಡುತ್ತದೆ. ಹೈಡ್ರೋಜನ್ ಬಾಂಬ್ಗಳ ಸಿಡಿತದಿಂದ ಸಾಕಷ್ಟು ಹಾನಿ ಸಂಭವಿಸುತ್ತದೆ’ ಎಂದು ಎಚ್ಚರಿಸಿದರು.
‘ರಾಜ್ಯದಲ್ಲಿ ಮುಂದಿನ ಸರ್ಕಾರ ಯಾವುದು ಎಂಬುದರ ಕುರಿತು ಎರಡು ತಿಂಗಳ ಬಳಿಕ ಹೇಳುತ್ತೇನೆ. ಈಗಲೇ ಮಾತನಾಡಿದರೆ ಒಬ್ಬರಿಗೆ ನೋವು ಮತ್ತೊಬ್ಬರಿಗೆ ಸಂತಸ ಆಗುತ್ತದೆ. ಯಾರಿಗೂ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಹೇಳುವುದಿಲ್ಲ. ಬಿತ್ತಿದಾ ಬೆಳೆಸು ಪರರು ಕೊಯ್ದಾರು, ಬಿತ್ತಿದ ಬೀಜವೊಂದು - ಫಸಲು ಇನ್ನೊಂದು’ ಆಗಲಿದೆ ಎಂದು ಹೇಳಿದರು.
‘ಆಳವಾದ ಅಭ್ಯಾಸದ ಕೊರತೆಯಿಂದ ಹಿಂದೂ ಧರ್ಮದ ಕುರಿತು ಕೆಲವರು ಅವಹೇಳನಕಾರಿ ಹೇಳಿಕೆ ನೀಡುತ್ತಾರೆ. ಯಾವ ಹೇಳಿಕೆಯೂ ಧರ್ಮಕ್ಕೆ ಮಾರಕವಲ್ಲ. ಧರ್ಮವೇ ಧರ್ಮಕ್ಕೆ ಶತ್ರುವಾದರೆ ಅದರ ಪರಿಣಾಮ ಏನೆಂಬುದನ್ನು ಮಹಾಭಾರತ ಸಾಬೀತುಪಡಿಸಿದೆ. ಧಾರ್ಮಿಕ ನಂಬಿಕೆ ಕುರಿತು ಅಪಹಾಸ್ಯ ಮಾಡುವುದರಲ್ಲಿಯೇ ಕೆಲವರಿಗೆ ಸುಖ ಸಿಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.