ಬೆಂಗಳೂರು: ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನದ ಅನುಸಾರ ಡಿಎಂಕೆ ಸೋಮವಾರ ಕರ್ನಾಟಕ ಹೈಕೋರ್ಟ್ನಲ್ಲಿ ಲಿಖಿತ ಆಕ್ಷೇಪಣೆ ಸಲ್ಲಿಸಿತು.
ಪ್ರಕರಣ ಕಾಸ್ ಲಿಸ್ಟ್ನಲ್ಲಿ ಇರದ ಕಾರಣ ಹೈಕೋರ್ಟ್ ಕಚೇರಿಯಲ್ಲಿ ಡಿಎಂಕೆ ಪರ ವಕೀಲರು ೮೧ ಪುಟಗಳ ಲಿಖಿತ ಆಕ್ಷೇಪಣೆ ಸಲ್ಲಿಸಿದರು.
ಕೆಳ ನ್ಯಾಯಾಲಯದ ಆದೇಶ ಸರಿ ಇದೆ. ಜಯಲಿತಾ ಮತ್ತು ಅವರ ಆಪ್ತ ಗೆಳತಿ ಶಶಿಕಲಾ ಜಂಟಿಯಾಗಿ ಅಕ್ರಮ ಕೂಟ ರಚಿಸಿಕೊಂಡು ಅಧಿಕಾರದ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅಕ್ರಮ ಆಸ್ತಿ ಗಳಿಸಿದ್ದಾರೆ. ಈ ಮೇಲ್ಮನವಿಯಲ್ಲಿ ಎಐಎಡಿಎಂಕೆ ನಾಯಕಿ ಜಯಲಲಿತಾ ಪರ ವಕೀಲರ ವಾದವನ್ನು ಮನ್ನಿಸಬಾರದು ಎಂದು ಕೋರಲಾಗಿದೆ.
ಸರ್ಕಾರದ ವಿಶೇಷ ವಕೀಲ ಭವಾನಿ ಸಿಂಗ್ ನೇಮಕ ಕಾನೂನಾತ್ಮಕವಾಗಿ ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಲಿಖಿತ ಆಕ್ಷೇಪಣೆಗೆ ಅವಕಾಶ ನೀಡಲಾಗಿದೆ. ಮಂಗಳವಾರ ಜಯಾಪರ ವಕೀಲರು ಪ್ರತಿ ಆಕ್ಷೇಪಣೆ ಸಲ್ಲಿಸುವ ನಿರೀಕ್ಷೆ ಇದೆ.