ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಜವಳಿ ಇಲಾಖೆ ವತಿಯಿಂದ ನೇಕಾರರಿಗೆ ಎರಡು ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ದೊಡ್ಡಬಳ್ಳಾಪುರದ ಜವಳಿ ಪಾರ್ಕ್ಗೆ ಬುಧವಾರ ಭೇಟಿ ನೀಡಿ ಜವಳಿ ಪಾರ್ಕ್ ಉದ್ಯಮಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರದ ಜವಳಿ ಪಾರ್ಕ್ ಸೇರಿದಂತೆ ರಾಜ್ಯದಲ್ಲಿ ರೋಗಗ್ರಸ್ಥ ಜವಳಿ ಉದ್ಯಮಗಳನ್ನು ಪುನಶ್ಚೇತನಗೊಳಿಸಲು ವಿಶೇಷ ಅನುದಾನ ನೀಡುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ಜವಳಿ ಪಾರ್ಕ್ನಲ್ಲಿ ತ್ಯಾಜ್ಯ ಶುದ್ದೀಕರಣ ಘಟಕದ ನವೀಕರಣಕ್ಕೆ ವಿಶೇಷ ಅನುದಾನ ನೀಡಲಾಗುವುದು ಎಂದರು.
ದೊಡ್ಡಬಳ್ಳಾಪುರ ಇಂಟಗ್ರೇಟೆಡ್ ಟೆಕ್ಸ್ಟೈಲ್ ಪಾರ್ಕ್ ಅಧ್ಯಕ್ಷ ಎಚ್.ಜಿ.ಜಗನ್ನಾಥ್ ಮಾತನಾಡಿ, ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಜವಳಿ ಉದ್ಯಮ ಬಹಳ ಕುಸಿದಿದ್ದು ಈ ನಿಟ್ಟಿನಲ್ಲಿ ನೆರೆಯ ಮಹಾರಾಷ್ಟ್ರದಂತೆ ರಾಜ್ಯ ಸರ್ಕಾರವು ರಾಜ್ಯದ ಜವಳಿ ಉದ್ಯಮಕ್ಕೆ 20 ಎಚ್.ಪಿ ವರೆವಿಗೆ ರಿಯಾಯಿತಿ ವಿದ್ಯುತ್ ನೀಡಬೇಕಿದೆ.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರಾಜ್ಯದ ಪ್ರಥಮ ಜವಳಿ ಪಾರ್ಕ್ ಎಂಬ ಹೆಗ್ಗಳಿಕೆ ದೊಡ್ಡಬಳ್ಳಾಪುರ ಜವಳಿ ಪಾರ್ಕಿಗೆ ಪುನಶ್ಚೇತನ ನೀಡಬೇಕು ಎಂದರು
ಸಭೆಯಲ್ಲಿ ಜವಳಿ ಇಲಾಖೆ ಆಯುಕ್ತ ರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ನಜೀರ್ ಅಹಮದ್, ಡಿಐಟಿಪಿ ನಿರ್ದೇಶಕ ಗಿರೀಶ್,ಟಿ.ವಿ. ಮಾರುತಿ ಮತ್ತಿತರರು ಹಾಜರಿದ್ದರು.