ಬೆಳಗಾವಿ: ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಇದೇ 8ರಂದು ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
‘ಅಂದು ಬೆಳಿಗ್ಗೆ 11ಕ್ಕೆ ನಗರದ ಕ್ಲಬ್ ರಸ್ತೆಯಲ್ಲಿರುವ ಸಿಪಿಇಡಿ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಸಂಜೆ ಕಾಗವಾಡದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವರು. 9ರಂದು ದಾವಣಗೆರೆ, ಹಾಸನದಲ್ಲಿ ಪ್ರಚಾರ ನಡೆಸುವರು’ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಫ್ಖಾನ್ ಪಠಾಣ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ. ಇದಕ್ಕಾಗಿ ಆ ಪಕ್ಷದೊಂದಿಗೆ ಕೈಜೋಡಿಸಿದ್ದೇವೆ. ಇಲ್ಲಿನ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್ನ ಫಿರೋಜ್ ಸೇಠ್ ವಿರುದ್ಧವಾಗಿ ಸ್ಪರ್ಧಿಸಿರುವ ಜೆಡಿಎಸ್ನ ಆಶ್ಫಾಕ್ಅಹಮದ್ ಮಡಕಿ ಅವರಿಗೆ ಪಕ್ಷ ಬೆಂಬಲ ನೀಡಿದೆ. ಈ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ’ ಎಂದು ಹೇಳಿದರು.
ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಶ್ಫಾಕ್ಅಹಮದ್ ಮಡಕಿ, ಮುಖಂಡರಾದ ಮೆಹನೊದ್ದೀನ್ ಮಕಾನದಾರ, ಫೈಜುಲ್ಲಾ ಮಾಡಿವಾಲೆ, ಕಲೀಂ ಮಾಡಿವಾಲೆ ಇದ್ದರು.