ಉದನೆ–ಗುಂಡ್ಯ ನಡುವೆ ಈ ಅಪಘಾತ ಸಂಭವಿಸಿದೆ. ಜಿಲ್ಲಾಧಿಕಾರಿ ಇಬ್ರಾಹಿಂ ಅವರು ಬೆಂಗಳೂರಿನತ್ತ ತೆರಳುತ್ತಿದ್ದರೆ, ಸ್ಕಾರ್ಪಿಯೊ ಬೆಂಗಳೂರಿನಿಂದ ಬರುತ್ತಿತ್ತು. ಸ್ಕಾರ್ಪಿಯೊದಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದೆ. ಇಬ್ರಾಹಿಂ ಅವರ ಪತ್ನಿ, ಕಾರಿನ ಚಾಲಕನಿಗೂ ಗಾಯವಾಗಿದೆ. ಎಲ್ಲರನ್ನೂ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಟ್ರಕ್ ಒಂದನ್ನು ಹಿಂದಿಕ್ಕುವ ಭರದಲ್ಲಿದ್ದ ಸ್ಕಾರ್ಪಿಯೊ ಎದುರಿನಿಂದ ಬರುತ್ತಿದ್ದ ಫಾರ್ಚುನರ್ ವಾಹನಕ್ಕೆ ಡಿಕ್ಕಿ ಹೊಡೆಯಿತು. ಸ್ಕಾರ್ಪಿಯೊದಲ್ಲಿದವರ ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ಅಪಘಾತದದಿಂದಾಗಿ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತು. ಅದೇ ದಾರಿಯಾಗಿ ತುಮಕೂರಿಗೆ ತೆರಳುತ್ತಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಶಶಿ ಬೆಳ್ಳಾಯರು, ಗಿರೀಶ, ಸುನಿಲ್ ಕೃಷ್ಣಾಪುರ, ಮನೋಹರ್ ಮತ್ತಿತರರು ರಸ್ತೆ ಸಂಚಾರ ಸುಗಮಗೊಳಿಸಲು ಶ್ರಮಿಸಿದರು. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.