ದಾವಣಗೆರೆ: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಸಮೀಪದ ಇಟಗಿಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬಸ್-ಕ್ರೂಸರ್ ಅಪಘಾತದಲ್ಲಿ 7 ಜನ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.
ದಾವಣಗೆರೆಯಿಂದ 11 ಜನರು ಕ್ರೂಸರ್ ವಾಹನದಲ್ಲಿ ರಾಯಚೂರಿನ ತಿಂತಿಣಿ ಮೌನೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದರು. ರಾಯಚೂರಿನ ಶಕ್ತಿನಗರದಿಂದ ಸಾಗರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕ್ರೂಸರ್ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಬಿ. ಕೊಟ್ರೇಶ್ ನಗರದ ಸಿಜಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಮೃತರ ವಿವರ: ದ್ರೋಣಾಚಾರ್(50), ಶ್ರೀನಿವಾಸ ಪತ್ತಾರ್(71),ಮಲ್ಲೇಶ್(40), ಕ್ರೂಸರ್ ಚಾಲಕ ಮೌನೇಶ್(35), ನಾಗರಾಜಾಚಾರ್ ಸಿರಿಗೆರೆ(50), ದಾವಣಗೆರೆ ಬೊಂಬು ಬಜಾರ್ ನಿವಾಸಿ ಗೋಪಾಲಾಚಾರ್(52), ಹರಪನಹಳ್ಳಿಯ ಬಿ. ಕೊಟ್ರೇಶ್(40).
ಗಾಯಾಳುಗಳು: ದಾವಣಗೆರೆಯ ವಿ.ಎಂ. ಕೊಟ್ರೇಶ್, ಜನಾರ್ದನ, ಮೌನೇಶಾಚಾರ್ ಕುಣಿಬೆಳಕೆರೆ, ಹರಪನಹಳ್ಳಿಯ ಭದ್ರಾಚಾರಿ.
ಗಾಯಾಳುಗಳನ್ನು ನಗರದ ಬಾಪೂಜಿ ಹಾಗೂ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಖಿಲಭಾರತ ವಿಶ್ವಕರ್ಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಪಿ. ಮೋಹನಾಚಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.
ಕೆಎಸ್ಆರ್ಟಿಸಿ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ. ಸಂಸ್ಥೆಯು ಇದಕ್ಕೆ ಸೂಕ್ತ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಶವವಿಟ್ಟು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.