ಬೆಂಗಳೂರು: ಕೆಜೆಪಿ ಮುಖಂಡ ಬಿ.ಎಸ್ಯಡಿಯೂರಪ್ಪ ಅವರನ್ನು ವಾಪಸ್ ಕರೆತರಲು ಬಿಜೆಪಿ ಮುಖಂಡರು ಮತ್ತೆ ಲಾಬಿ ಆರಂಭಿಸಿದ್ದಾರೆ.
ಡಿ.ವಿ.ಸದಾನಂದ ಗೌಡ, ಅರವಿಂದ ಲಿಂಬಾವಳಿ ಮತ್ತು ಬಸವರಾಜ ಬೊಮ್ಮಾಯಿ ಇದ್ದ ನಿಯೋಗ ಸೋಮವಾರ ಸಂಜೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಅಹಮದಾಬಾದ್ನಲ್ಲಿ ಭೇಟಿ ಮಾಡಿ ಚರ್ಚಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಾದರೆ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎಂಬುದನ್ನು ವಿವರಿಸಿತು ಎನ್ನಲಾಗಿದೆ.
`ಬಿಜೆಪಿಯ ರಾಷ್ಟ್ರೀಯ ಪ್ರಮುಖರ ಸಭೆ ಈ ವಾರದಲ್ಲಿ ದೆಹಲಿಯಲ್ಲಿ ನಡೆಯಲಿದ್ದು, ಅಲ್ಲಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ವಿಷಯ ಪ್ರಸ್ತಾಪಿಸಬೇಕು. ಇದನ್ನು ವಿರೋಧಿಸುತ್ತಿರುವ ಎಲ್.ಕೆ.ಅಡ್ವಾಣಿ ಅವರಿಗೆ ವಾಸ್ತವ ಸಂಗತಿಯನ್ನು ಮನವರಿಕೆ ಮಾಡಬೇಕು' ಎಂದು ಈ ನಿಯೋಗ ಮೋದಿ ಅವರಲ್ಲಿ ಮನವಿ ಮಾಡಿತು ಎಂದು ಗೊತ್ತಾಗಿದೆ.
ಕೆಜೆಪಿ ಸಂಘಟನೆ: ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಸೇರಿಸಿಕೊಳ್ಳಲು ಪ್ರಯತ್ನ ನಡೆಸಿದ್ದರೆ ಅತ್ತ ಯಡಿಯೂರಪ್ಪ ಅವರು ಕೆಜೆಪಿ ಸಂಘಟನೆಯಲ್ಲಿ ತೊಡಗಿದ್ದಾರೆ.
ಸೋಮವಾರ ಮಧ್ಯಾಹ್ನ ಪಕ್ಷದ ಕಚೇರಿಯಲ್ಲಿ ಪ್ರಮುಖರ ಸಭೆ ನಡೆಸಿ, ಇದೇ 12ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ನಡೆಸಲು ತೀರ್ಮಾನಿಸಿದರು. ಅಂದು ಬೆಳಿಗ್ಗೆ ಮಲ್ಲೇಶ್ವರದ ಕೆನರಾ ಯೂನಿಯನ್ನಲ್ಲಿ ನಡೆಯುವ ಕಾರ್ಯಕಾರಿಣಿಯಲ್ಲಿ 250ಕ್ಕೂ ಹೆಚ್ಚು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.