ಬೆಂಗಳೂರು: ರಾಮಮೂರ್ತಿನಗರದ ರಾಜು ಎಂಬುವರ ಮನೆಗೆ ರೌಡಿಗಳು ನುಗ್ಗಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.
ಇಬ್ಬರು ರೌಡಿಗಳು ಮನೆಯ ಕಾಂಪೌಂಡ್ ಹಾರಿ ಬಂದು ರಾಜು ಮತ್ತು ಅವರ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ರಾಜು ಅವರ ಮನೆ ಪಕ್ಕದಲ್ಲಿ ದೇವಸ್ಯ ಎಂಬುವರು ಮನೆ ನಿರ್ಮಿಸುತ್ತಿದ್ದಾರೆ. ದೇವಸ್ಯ ಕೇರಳ ಮೂಲದ ಐಟಿ ಅಧಿಕಾರಿ ಎನ್ನಲಾಗಿದೆ. ಮೂರು ಅಡಿ ಜಾಗ ಬಿಟ್ಟು ಮನೆ ಕಟ್ಟುವಂತೆ ರಾಜು ದೇವಸ್ಯ ಅವರಿಗೆ ಹೇಳಿದ್ದರು. ಆದರೆ, ದೇವಸ್ಯ ಜಾಗ ಬಿಡಲು ನಿರಾಕರಿಸಿದ್ದರು ಎನ್ನಲಾಗಿದೆ.
ದೇವಸ್ಯ ಅವರು ನಿಯಮದಂತೆ ಮನೆ ಕಟ್ಟಬೇಕು ಎಂದು ರಾಜು ಬಿಬಿಎಂಪಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ದೇವಸ್ಯ ರೌಡಿಗಳನ್ನು ಬಿಟ್ಟು ರಾಜು ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆ ನಡೆಸಿದ ರೌಡಿಗಳು ಶಾಸಕ ಭೈರತಿ ಬಸವರಾಜು ಅವರ ಬೆಂಬಲಿಗರು ಎನ್ನಲಾಗಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.