ಆನೇಕಲ್: ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಆಹಾರವಾಗದಂತೆ ಬಿಜೆಪಿ ಜಾಗರೂಕತೆ ವಹಿಸಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಹೇಳಿದರು.
ಇಲ್ಲಿನ ಅತ್ತಿಬೆಲೆ ಸಮೀಪದ ಗೆಸ್ಟ್ ಲೈನ್ ಹೋಟೆಲ್ನಲ್ಲಿ ಬಿಬಿಎಂಪಿ ಸದಸ್ಯರು ಮತ್ತು ಮಂಡಲ ಅಧ್ಯಕ್ಷರಿಗೆ ಶುಕ್ರವಾರ ಆಯೋಜಿಸಲಾಗಿದ್ದ ಚಿಂತನಾ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷದ ಮಂಡಲ ಅಧ್ಯಕ್ಷರುಗಳಿಗೆ ಹಾಗೂ ಬಿಬಿಎಂಪಿ ಸದಸ್ಯರಿಗೆ ಸಂಘಟನೆ, ಜನ ಸಾಮಾನ್ಯರು ಮತ್ತು ಮಾಧ್ಯಮಗಳೊಂದಿಗೆ ವ್ಯವಹರಿಸುವ ಕುರಿತು, ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ತಿಳಿವಳಿಕೆ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಬಿಬಿಎಂಪಿಯ ಬಿಜೆಪಿ ಸದಸ್ಯರು ಹಾಗೂ ನಗರ ಜಿಲ್ಲೆಯ ಮಂಡಲ ಅಧ್ಯಕ್ಷರು ಸೇರಿದಂತೆ 120ಕ್ಕೂ ಹೆಚ್ಚು ಮಂದಿ ಎರಡು ದಿನಗಳ ಕಾಲ ಗೆಸ್ಟ್ಲೈನ್ ಹೋಟೆಲ್ನಲ್ಲಿ ನಡೆಯುವ ಅಭ್ಯಾಸ ವರ್ಗದಲ್ಲಿ ಪಾಲ್ಗೊಂಡಿದ್ದರು.
ಇದು ಪಕ್ಷದ ಆಂತರಿಕ ಕಾರ್ಯಕ್ರಮ.
ಪಕ್ಷದ ಸಂಘಟನೆ, ಜನಪ್ರತಿನಿಧಿಗಳ ಜವಾಬ್ದಾರಿಗಳ ಬಗ್ಗೆ ತಜ್ಞರು ಹಾಗೂ ಪಕ್ಷದ ಮುಖಂಡರು ಮಾರ್ಗದರ್ಶನ ನೀಡಿದರು ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಎನ್.ಬಸವರಾಜು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ನೆರವೇರಿಸಿದರು. ಸಂಸದ ಅನಂತ ಕುಮಾರ್, ಗೃಹ ಸಚಿವ ಆರ್. ಅಶೋಕ, ವಸತಿ ಸಚಿವ ವಿ. ಸೋಮಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮೇಯರ್ ಶಾರದಮ್ಮ ಮತ್ತಿತರರು ಮತ್ತಿತರರು ಪಾಲ್ಗೊಂಡಿದ್ದರು.