ಬೆಂಗಳೂರು (ಪಿಟಿಐ): ಭೂಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಮೇಲೆ ದಾಖಲಾಗಿರುವ ನಾಲ್ಕು ಮೊಕದ್ದಮೆಗಳ ವಿಚಾರಣೆಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ವಕೀಲ ಸಿರಾಜಿನ್ ಬಾಷಾ ಹಾಗೂ ಇತರರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಮೇಲೆ ಭೂಹಗರಣಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿದ್ದ ನಾಲ್ಕು ದೂರುಗಳ ವಿಚಾರಣೆಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ ಅವರು ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅವರ ಅಳಿಯ ಸೋಹನ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ಅವರು ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದರು.
ಅಲ್ಲದೆ ವಕೀಲರಾದ ಸಿರಾಜಿನ್ ಬಾಷಾ ಹಾಗೂ ಕೆ.ಎನ್. ಬಾಲರಾಜ್ ಅವರಿಗೆ ನೋಟಿಸ್ ಜಾರಿ ಮಾಡಿದರು.
ಮಾರ್ಚಿ 29 ರಂದು ಮುಖ್ಯಮಂತ್ರಿ ಅವರ ವಿರುದ್ದ ದಾಖಲಾಗಿದ್ದ ಮೊದಲ ದೂರಿನ ತನಿಖೆಗೂ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇಂದಿನ ಆದೇಶದೊಂದಿಗೆ ಐದೂ ದೂರುಗಳ ತನಿಖೆಗೂ ಹೈಕೋರ್ಟ್ ತಡೆಯಾಜ್ಞೆ ನೀಡಿದಂತಾಗಿದೆ.