ಬೆಂಗಳೂರು: ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ, ಶುಕ್ರ ವಾರ (ಅಕ್ಟೋಬರ್ 9) ವಿಚಾರಣೆಗೆ ಹಾಜರಾಗಲು ನಗರದ 1ನೇ ಎಸಿಎಂಎಂ ನ್ಯಾಯಾಲಯ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಸಮನ್ಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಸಿಐಡಿ, ಸೆಪ್ಟೆಂಬರ್ 26ರಂದು ಸ್ವಾಮೀಜಿ ವಿರುದ್ಧ 1,341 ಪುಟಗಳ ಆರೋಪ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಿತ್ತು.
ಜಾಮೀನು ರದ್ದು ವಿಚಾರಣೆ 16ಕ್ಕೆ ಮುಂದೂಡಿಕೆ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗೆ ನೀಡಿ ರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಕೋರಿ, ಸಿಐಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಗರದ 52ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 16ಕ್ಕೆ ಮುಂದೂಡಿದೆ.
‘ವೀರ್ಯ ಪರೀಕ್ಷೆ ಸೇರಿದಂತೆ ಮೂರು ಬಗೆಯ ವೈದ್ಯಕೀಯ ಪರೀಕ್ಷೆಗೆ ಸ್ವಾಮೀಜಿ ಹಾಜರಾಗಿಲ್ಲ. ಇದು ನಿರೀಕ್ಷಣಾ ಜಾಮೀನು ನೀಡುವಾಗಿನ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಅವರಿಗೆ ನೀಡಿರುವ ಜಾಮೀನು ರದ್ದುಪಡಿಸಬೇಕು’ ಎಂದು ಸಿಐಡಿ ಪರ ವಕೀಲರು ವಾದಿಸಿದರು.
ಸ್ವಾಮೀಜಿ ಪರ ವಕೀಲರು, ‘ಸ್ವಾಮೀಜಿ ಅವರ ವೈದ್ಯ ಕೀಯ ಪರೀಕ್ಷೆಗೆ ತಡೆ ಕೋರಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ಇತ್ಯರ್ಥಕ್ಕೆ ಇನ್ನೂ ಕಾಲಾವಕಾಶ ಬೇಕಾಗಿದೆ. ಹಾಗಾಗಿ ಅರ್ಜಿಯ ವಿಚಾರಣೆಯನ್ನು 20 ದಿನ ಮುಂದೂಡಬೇಕು’ ಎಂದು ಮನವಿ ಮಾಡಿದರು. ವಾದ– ಪ್ರತಿವಾದ ಆಲಿಸಿದ ನ್ಯಾಯಾ ಧೀಶರು, ಅರ್ಜಿಯ ವಿಚಾರಣೆಯನ್ನು ಅ. 16ಕ್ಕೆ ಮುಂದೂಡಿದರು.