ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬ ವರ್ಗದ ವಿರುದ್ಧ ವಕೀಲ ಸಿರಾಜಿನ್ ಬಾಷಾ ಅವರು ದಾಖಲಿಸಿರುವ ಐದು ದೂರುಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ನಗರದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶುಕ್ರವಾರ ನಡೆಸಲಿದೆ.
ಮುಖ್ಯಮಂತ್ರಿಗಳ ವಿರುದ್ಧದ ಭೂಹಗರಣದ ತನಿಖೆಯನ್ನು ಯಾರು ನಡೆಸಬೇಕು ಎಂಬ ಬಗ್ಗೆ ಹೈಕೋರ್ಟ್ನಲ್ಲಿ ಪ್ರಕರಣವು ಇತ್ಯರ್ಥಕ್ಕೆ ಬಾಕಿ ಇರುವ ಹಿನ್ನೆಲೆಯಲ್ಲಿ ವಿಚಾರಣೆಗೆ ತಡೆ ನೀಡಬೇಕು ಎಂದು ಅವರ ಅಳಿಯ ಸೋಹನ್ ಕುಮಾರ್ ಸಲ್ಲಿಸಿರುವ ಮನವಿಯನ್ನು ವಿಚಾರಣೆಗೆ ಅಂಗೀಕರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಇದೇ ವೇಳೆ ವಾದ, ಪ್ರತಿವಾದ ಆರಂಭಗೊಳ್ಳಲಿದೆ. ಈ ಮಧ್ಯೆ, ಬಾಷಾ ಅವರು ಯಡಿಯೂರಪ್ಪನವರ ವಿರುದ್ಧ ದಾಖಲು ಮಾಡಿದ ಐದನೇ ದೂರಿನ ವಿಚಾರಣೆಯನ್ನು ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ ಗುರುವಾರ ನಡೆಸಿದರು.
ಈ ದೂರಿನಲ್ಲಿ ಆದರ್ಶ ಡೆವಲಪರ್ಸ್ ಸಂಸ್ಥೆಗೆ ಯಡಿಯೂರಪ್ಪ ಅನುಕೂಲ ಮಾಡಿಕೊಟ್ಟಿರುವುದು, ಮುಖ್ಯಮಂತ್ರಿ ಕೋಟಾದ ಅಡಿ ಸೋಹನ್ ಕುಮಾರ್ ಅವರಿಗೆ ನಗರದಲ್ಲಿ ನಿಯಮ ಉಲ್ಲಂಘಿಸಿ ನಿವೇಶನ ನೀಡಿರುವುದು ಹಾಗೂ ನಾಗರಬಾವಿಯಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್ ನಡೆಸಲಾಗಿದೆ ಎಂಬ ಆರೋಪಗಳು ಸೇರಿವೆ.