ಶಿವಮೊಗ್ಗ: ತಾಲ್ಲೂಕಿನ ಕೂಡಲಿಯ ಶೃಂಗೇರಿ ಶಾರದಾ ಪೀಠದ 25ನೇ ಪೀಠಾಧಿಪತಿಯಾಗಿ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವ ಶನಿವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಧಾರವಾಡದ ರಾಜೇಶ್ವರ ಶಾಸ್ತ್ರಿ, ಹೆಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತರು, ಮತ್ತೂರಿನ ಮಾರ್ಕಂಡೇಯ ಅವಧಾನಿಗಳು, ಹರಿಹರದ ವಿದ್ಯಾನಾಥ ಶಾಸ್ತ್ರಿ, ಕೃಷ್ಣಮೂರ್ತಿ ಸೋಮಯಾಜಿ, ನಾಗೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮಗಳು ನಡೆದವು.
ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಹೂಗಳಿಂದ ಮಠದ ವೇದಿಕೆ ಸಿಂಗರಿಸಲಾಗಿತ್ತು. ಉಡುಪಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ,ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಹರಿಹರ ಭಾಗದ ಸಾವಿರಾರು ಭಕ್ತರು ಮಹೋತ್ಸವಕ್ಕೆ ಸಾಕ್ಷಿಯಾದರು.
ಬೆಳಿಗ್ಗೆ 7ರಿಂದಲೇ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಶ್ರೀಗಳಿಗೆ ದಂಡಸ್ನಾನ, ತುಂಗಭದ್ರಾ ನದಿ ಸಂಗಮ ದರ್ಶನ, ರುದ್ರಾಭಿಷೇಕ, ಹೋಮ, ಗಂಗಾ, ಯಮುನಾ ನದಿಗಳಿಂದ ಸಂಗ್ರಹಿಸಿದ್ದ ಕಲಶೋದಕಗಳಿಂದ ಮಹಾಭಿಷೇಕ ಮಾಡಲಾಯಿತು.
ರಜತ ಪೀಠಾರೋಹಣ, ಪಟ್ಟಾಭಿಷೇಕದ ನಂತರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.