ಬೆಂಗಳೂರು: ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡ ನಟಿ ಶ್ರುತಿ ಅವರನ್ನು ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ವಾಂತಿ-ಭೇದಿಯಿಂದಾಗಿ ಅಸ್ವಸ್ಥಗೊಂಡಿದ್ದ ಶ್ರುತಿ ಅವರನ್ನು ಶುಕ್ರವಾರ ಮಧ್ಯಾಹ್ನ ಬಸವೇಶ್ವರನಗರದ ಪುಣ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯೆ ಪುಣ್ಯ ನಾಗರಾಜ್, `ವಿಷಾಹಾರ ಸೇವನೆಯಿಂದ ಅವರು ಅಸ್ವಸ್ಥಗೊಂಡಿದ್ದಾರೆ. ಶೀಘ್ರವೇ ಅವರು ಗುಣಮುಖರಾಗಲಿದ್ದಾರೆ' ಎಂದು ಹೇಳಿದ್ದಾರೆ.
`ಪತ್ರಕರ್ತ ಚಂದ್ರಚೂಡ್ ಜತೆಗಿನ ಎರಡನೇ ಮದುವೆ ವಿವಾದದಿಂದ ಬೇಸರಗೊಂಡು ಶ್ರುತಿ ಅವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ' ಎಂದು ನಗರದಲ್ಲಿ ಶುಕ್ರವಾರ ವದಂತಿ ಹರಡಿತ್ತು. ಈ ಸಂಗತಿ ತಿಳಿದ ಕಾಮಾಕ್ಷಿಪಾಳ್ಯ ಪೊಲೀಸರು, ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಮಾಹಿತಿ ಪಡೆದು ಕೊಂಡರು.
`ಮೂರು ದಿನಗಳ ಹಿಂದೆ ಶಿರಡಿಗೆ ಹೋಗಿದ್ದೆ. ಗುರುವಾರ ನಗರಕ್ಕೆ ವಾಪಸ್ ಬರುವಾಗ ಮಾರ್ಗ ಮಧ್ಯೆ ಡಾಬಾವೊಂದರಲ್ಲಿ ಊಟ ಮಾಡಿದೆ. ಇದರಿಂದ ಊಟದಲ್ಲಿ ವ್ಯತ್ಯಾಸವಾಗಿ ಬೆಳಿಗ್ಗೆಯಿಂದ ವಾಂತಿ-ಭೇದಿ ಆಯಿತು. ಆತ್ಮಹತ್ಯೆ ಮಾಡಿಕೊಳ್ಳುವಂತಹದ್ದು ಏನೂ ಆಗಿಲ್ಲ' ಎಂದು ಶ್ರುತಿ ಅವರು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ಶ್ರುತಿ ಅವರ ಆರೋಗ್ಯ ವಿಚಾರಿಸಿದರು.