ಬೆಂಗಳೂರು: ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಇಂತಹ ಪ್ರಕರಣಗಳ ತನಿಖೆಯನ್ನು ಎಸಿಪಿ ಮತ್ತು ಅವರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳಿಂದ ನಡೆಸಲು ತೀರ್ಮಾನಿಸಿದೆ.
ಶುಕ್ರವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ತ್ವರಿತ ನ್ಯಾಯಾಲಯ ಸ್ಥಾಪನೆ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜತೆ ಶೀಘ್ರ ಮಾತುಕತೆ ನಡೆಸಲಾಗುವುದು’ ಎಂದರು.
ಬೆಂಗಳೂರಲ್ಲಿ ಇತ್ತೀಚಿನ ಮೂರೂ ಪ್ರಕರಣಗಳು ಖಾಸಗಿ ಶಾಲೆಗಳಲ್ಲಿ ನಡೆದಿವೆ. ಸಿಬ್ಬಂದಿಯೇ ಈ ಹೀನ ಕೃತ್ಯ ಎಸಗಿದ್ದಾರೆ. ಈ ಘಟನೆಗಳಲ್ಲಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡಿದೆ. ಘಟನೆ ನಡೆದ ತಕ್ಷಣ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಈಗ ಅವರೆಲ್ಲ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು. ಶಾಲೆಗಳಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲಿ ಸರ್ಕಾರದ ಜೊತೆಗೆ ಆಡಳಿತ ಮಂಡಳಿಯ ಜವಾಬ್ದಾರಿಯೂ ಇದೆ. ಇತ್ತೀಚೆಗೆ ನಡೆದ ಘಟನೆಗಳಲ್ಲಿ ಪೊಲೀಸರು ಶಾಲಾ ಮುಖ್ಯಸ್ಥರ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ ಎಂದರು.
ಮಾಧ್ಯಮಗಳಿಗೆ ಮನವಿ: ‘ಮಕ್ಕಳ ಮತ್ತು ಸಮಾಜದ ಹಿತದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ಹೆಚ್ಚು ಉತ್ಪ್ರೇಕ್ಷೆಯಿಂದ ವರದಿ ಮಾಡಬೇಡಿ’ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ ಅವರು, ಇಂತಹ ವರದಿಗಳು ವಿಕೃತ ಮನಸ್ಸಿನವರಿಗೆ ಇನ್ನಷ್ಟು ಉತ್ತೇಜನ ನೀಡುತ್ತದೆ ಎಂದರು. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಮುಖ ತೀರ್ಮಾನಗಳು
* ವಿವಿಧ ಇಲಾಖೆಗಳಿಂದ ಜಾಗೃತಿ ಅಭಿಯಾನ
* ಶಾಲೆ ಸುತ್ತ ಪೊಲೀಸ್ ಸಿಬ್ಬಂದಿ ಗಸ್ತು
* ಸುರಕ್ಷತಾ ಮಾರ್ಗಸೂಚಿ ಪಾಲನೆ ಕಡ್ಡಾಯ
* ಮಾರ್ಗಸೂಚಿ ಜಾರಿ ಗಡುವು ವಿಸ್ತರಣೆ
*ವಿಕೃತ ಮನಸ್ಸಿನ ಸಿಬ್ಬಂದಿ ಮೇಲೆ ನಿಗಾ
* ಪೊಲೀಸರು ಶಾಲೆಗಳಿಗೆ ಭೇಟಿ ನೀಡಿ ಶಾಲಾಡಳಿತವನ್ನು ಎಚ್ಚರಿಸಬೇಕು