ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸೇರುವುದಕ್ಕೂ ಮುನ್ನ ನಾಟಕೀಯ ಬೆಳವಣಿಗೆಗಳು ನಡೆದರೂ ಅಂತಿಮವಾಗಿ ಹೊಸ ನಾಯಕನ ಆಯ್ಕೆ ಸುಸೂತ್ರವಾಗಿ ನಡೆಯಿತು.
ನಿರೀಕ್ಷೆಯಂತೆ ಜಗದೀಶ ಶೆಟ್ಟರ್ ಸರ್ವಾನುಮತದಿಂದ ಹೊಸ ನಾಯಕನಾಗಿ ಆಯ್ಕೆಯಾದರು. ಬಳಿಕ ಮಾತನಾಡಿದ ಎಲ್ಲ ಮುಖಂಡರೂ ಒಗ್ಗಟ್ಟಿನ ಮಂತ್ರ ಜಪಿಸಿದರು. `ಚುನಾವಣಾ ವರ್ಷವಾದ ಕಾರಣ, ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು~ ಎಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, `ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನ, ಭಾಗ್ಯಲಕ್ಷ್ಮಿ ಬಾಂಡ್... ಹೀಗೆ ಹಲವು ಸಾಮಾಜಿಕ ಭದ್ರತಾ ಯೋಜನೆಗಳ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ತಕ್ಷಣ ಇದಕ್ಕೆ ಚುರುಕು ಮುಟ್ಟಿಸಬೇಕು~ ಎಂದು ನಿಯೋಜಿತ ಮುಖ್ಯಮಂತ್ರಿ ಶೆಟ್ಟರ್ ಅವರಿಗೆ ಸಲಹೆ ನೀಡಿದರು.
`ಚುನಾವಣೆಗೆ ಇನ್ನು ಕೇವಲ 10 ತಿಂಗಳು ಇದೆ. ಶೆಟ್ಟರ್ ವಿಶ್ರಾಂತಿ ಇಲ್ಲದೆ ಓಡಾಡಬೇಕು. ಅಭಿವೃದ್ಧಿ ಕಡೆಗೆ ಗಮನ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು~ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, `ಹನ್ನೊಂದು ತಿಂಗಳು ಉತ್ತಮ ಆಡಳಿತ ನೀಡಿದ್ದೇನೆ. ಉಳಿದ ಅವಧಿಗೆ ಶೆಟ್ಟರ್ ಅವರಿಗೆ ಪೂರ್ಣ ಸಹಕಾರ ನೀಡುತ್ತೇನೆ~ ಎಂದು ಹೇಳಿದರು.